200ಕ್ಕೂ ಹೆಚ್ಚು ಜನರಿಗೆ ಶ್ರವಣ ಸಾಧನ ವಿತರಣೆ : ಸಚಿವ ಸಂತೋಷ್ ಲಾಡ್

ಧಾರವಾಡ, ಸೆ.14 : ಶ್ರವಣ ದೋಷವುಳ್ಳವರಿಗೆ ಅಗತ್ಯವಿದ್ದಲ್ಲಿ ಮುಂದಿನ ಆರು ತಿಂಗಳಲ್ಲಿ ಮತ್ತೊಮ್ಮೆ ಶಿಬಿರ ಹಮ್ಮಿಕೊಳ್ಳಲಾಗುವುದು. ಇಂದಿನ ಚಿಕಿತ್ಸಾ ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರಿಗೆ ಶ್ರವಣ ದೋಷ ನಿವಾರಣಾ ಸಾಧನಗಳನ್ನು ವಿತರಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದ್ದಾರೆ.
ರವಿವಾರ ಜಿಲ್ಲೆಯ ಕಲಘಟಗಿಯ ತಮ್ಮ ನಿವಾಸದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಬೆಂಗಳೂರಿನ ಶ್ರೀನಿವಾಸ ಹೆಲ್ತ್ ಕೇರ್ ಸಹಯೋಗದಲ್ಲಿ ನಮ್ಮ ನಿವಾಸದಲ್ಲೆ ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣ ಸಾಧನ ವಿತರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.
ವಿದ್ಯಾರ್ಥಿಗಳು, ರೈತರು ಸೇರಿದಂತೆ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸುವ ಭರವಸೆ ನೀಡಲಾಗಿದೆ. ಕಲಘಟಗಿಯಲ್ಲಿ ಮೊದಲ ಬಾರಿಗೆ ಶ್ರವಣದೋಷ ಚಿಕಿತ್ಸಾ ಶಿಬಿರ ಹಾಗೂ ಶ್ರವಣ ಸಾಧನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಫೌಂಡೇಶನ್ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಈ ಬಾರಿ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣ ಸಾಧನ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂತಹ ಕಾರ್ಯಕ್ರಮದಿಂದ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.
ಕಲಘಟಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಂದ ಸಾರ್ವಜನಿಕರು ಶಿಬಿರಕ್ಕೆ ಭೇಟಿ ನೀಡಿದ್ದರು.