ಸೆ.19ರಂದು ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ : ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ, ಸೆ.6: ವೀರಶೈವ ಲಿಂಗಾಯತ ಎರಡೂ ಒಂದೇ ಧರ್ಮ ಆಗಿದ್ದು, ಸಮಾಜದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಸೆ.19ರಂದು ಇಲ್ಲಿನ ನೆಹರೂ ಮೈದಾನದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಜನಗಣತಿ ನಿರ್ಣಯ ಮಾಡಿದೆ. ಹಿಂದೆ ಜನಗಣತಿ ಆದಾಗ ಸಮಾಜ ವಿರೋಧ ವ್ಯಕ್ತಪಡಿಸಿದ ಕಾರಣ ಮತ್ತೊಂದು ಜನಗಣತಿಗೆ ಸಿದ್ಧತೆ ನಡೆಸಿದೆ. ಆದ್ದರಿಂದ ಶುಕ್ರವಾರ ನಾವು ನೂರಾರು ಮಠಾಧಿಪತಿಗಳು ಸೇರಿ ಸಭೆ ನಡೆಸಿ ಚರ್ಚಿಸಿದ್ದೇವೆ. ವೀರಶೈವ ಲಿಂಗಾಯತ ಎರಡೂ ಬೇರೆ ಧರ್ಮ ಅಲ್ಲ. ಬೇರೆ ಎಂದು ಇಬ್ಭಾಗ ಮಾಡುತ್ತಿದ್ದು, ಇದನ್ನು ಎಲ್ಲರೂ ಖಂಡಿಸುತ್ತೇವೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾದ ನಿಲುವು ಅದೇ ಆಗಿರುತ್ತದೆ. ಅದರ ಪರವಾಗಿಯೇ ನಾವು ಇರುತ್ತೇವೆ. ಲಿಂಗಾಯತ ಧರ್ಮ ಮಾಡಬೇಕೆಂದು ಬಸವಣ್ಣನವರ ಹೆಸರು ಬಳಕೆ ಮಾಡಿಕೊಂಡು ಕೆಲವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ತತ್ವ ಪ್ರಧಾನ ಧರ್ಮವೇ ಹೊರತು, ವ್ಯಕ್ತಿ ಪ್ರಧಾನ ಧರ್ಮವಲ್ಲ. ಬಸವ ಸಂಸ್ಕೃತಿ ಯಾತ್ರೆ ಹೆಸರಲ್ಲಿ ವೈದಿಕ ಸಂಸ್ಕೃತಿ ವಿರೋಧಿಸುತ್ತಿದ್ದಾರೆ. ಆ ವೇದಿಕೆಯಲ್ಲಿ ವೈದಿಕ ಪಾಠಶಾಲೆ ನಡೆಸುತ್ತಿದ್ದಾರೆ. ಅವರೇ ಅದರ ನೇತೃತ್ವ ವಹಿಸಿದ್ದಾರೆ. ಅವರ ನಡೆ, ನುಡಿ ಭಿನ್ನವಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಆಗಬಾರದು ಎನ್ನುವುದು ನಮ್ಮ ಸ್ಪಷ್ಟ ನಿಲುವು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಂದಗಿ ಸಾರಂಗಮಠದ ಪ್ರಭು ಸಾರಂಗಧರ ಸ್ವಾಮೀಜಿ, ಆಂಧ್ರ ಪ್ರದೇಶ ಬಿಚಕುಂದ ಸಂಸ್ಥಾನ ಮಠದ ಸೋಮಲಿಂಗ ಶಿವಾಚಾರ್ಯ ಸ್ವಾಮೀಜಿ, ಮಹಾರಾಷ್ಟ್ರ ಬ್ರಹ್ಮಲಿಂಗೇಶ್ವರ ಮಠದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ನಾಗಣಸೂರದ ಶ್ರೀಕಂಠ ಶಿವಾಚಾರ್ಯ, ತೆಲಂಗಾಣ ನಿಝಾಮಾಬಾದ್ನ ಸೋಮಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಸಹಿತ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಸೇರಿ ರಾಜ್ಯದ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.