ದಾವಣಗೆರೆ | ಬ್ಯಾಂಕ್ ನೌಕರನಿಂದ ಕೋಟ್ಯಂತರ ರೂ. ವಂಚನೆ; ಆರೋಪಿಯ ಬಂಧನ, 3 ಕೆ.ಜಿ.ಗೂ ಅಧಿಕ ಚಿನ್ನಾಭರಣ ವಶ

ದಾವಣಗೆರೆ : ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ 3.5 ಕೆ.ಜಿ. ಚಿನ್ನಾಭರಣಗಳನ್ನು ಕಳ್ಳತನ ಮಾಡಿ, ನಕಲಿ ಆಭರಣಗಳನ್ನು ಅಡವಿಟ್ಟು ಕೋಟ್ಯಂತರ ರೂ. ಸಾಲ ಪಡೆದಿದ್ದ ಆರೋಪದಲ್ಲಿ ಬ್ಯಾಂಕ್ ನೌಕರ ಸಂಜಯ್ ಟಿ.ಪಿ. ಎಂಬಾತನನ್ನು ಕೆಟಿಜೆ ನಗರದ ಠಾಣಾ ಪೊಲೀಸರು ಬಂಧಿಸಿ ಆತನಿಂದ 3 ಕೆ.ಜಿ. ಗೂ ಅಧಿಕ ತೂಕದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ದೇವರಾಜು ಅರಸು ಬಡಾವಣೆಯಲ್ಲಿನ ಸಿಎಸ್ಬಿ ಬ್ಯಾಂಕಿನಲ್ಲಿ ಎಪ್ರಿಲ್ನಲ್ಲಿ ವಾರ್ಷಿಕ ಆಡಿಟ್ ಮಾಡುವ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಬ್ಯಾಂಕಿನ ಮ್ಯಾನೇಜರ್ ಶಿವಕುಮಾರ್ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ವೇಳೆ ಬ್ಯಾಂಕಿನ ಗೋಲ್ಡ್ ಲೋನ್ ವಿಭಾಗದ ಸಿಬ್ಬಂದಿ ಸಂಜಯ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಬಿಸಿಎ ಪದವೀಧರನಾದ ಸಂಜಯ್ ಮುತ್ತೂಟ್ ಫೈನಾನ್ಸ್ ಸೇರಿದಂತೆ ಇತರ ಖಾಸಗಿ ಫೈನಾನ್ಸ್ಗಳಲ್ಲಿ ಕಾರ್ಯನಿರ್ವಹಿಸಿದ್ದ. ಆದರೆ ಸಿಎಸ್ಬಿ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ 6 ತಿಂಗಳಲ್ಲಿಯೇ ಅಲ್ಲಿನ ಆಭರಣಗಳನ್ನು ಕದ್ದು, ನಕಲಿ ಆಭರಣಗಳನ್ನು ಇಟ್ಟು ಅದರ ಮೇಲೂ ಲೋನ್ ಪಡೆದಿದ್ದ. ಗೋಲ್ಡ್ ಲೋನ್ ವಿಭಾಗದಲ್ಲಿ ಈತನೇ ಮುಖ್ಯ ಸಿಬ್ಬಂದಿಯಾದ ಕಾರಣದಿಂದ ಬ್ಯಾಂಕಿನ ಆಡಳಿತ ಮಂಡಳಿಗೆ ಆತನ ಕೃತ್ಯದ ಬಗ್ಗೆ ತಿಳಿದಿಲ್ಲ. ಆದರೆ ಆಡಿಟ್ ಮಾಡುವಾಗ ಬಂಗಾರದಲ್ಲಿ ವ್ಯತ್ಯಾಸ ಕಂಡು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಿದರು.
ಬ್ಯಾಂಕಿನ ಗ್ರಾಹಕರು ಅಡಮಾನ ಮಾಡಿದ ಸಾಲದ ಖಾತೆಗಳಲ್ಲಿನ ಒಟ್ಟು 1 ಕೋಟಿ 86 ಲಕ್ಷದ 22 ಸಾವಿರ ರೂ. ಬೆಲೆ ಬಾಳುವ 3,157.10 ಗ್ರಾಂ ಆಭರಣಗಳನ್ನು ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುವುದಲ್ಲದೇ ಬ್ಯಾಂಕಿನ ಗಮನಕ್ಕೆ ಬಾರದ ಹಾಗೇ ತನ್ನ ಸ್ನೇಹಿತರು, ಹಿತೈಷಿಗಳು, ಬಂಧುಗಳ ಹೆಸರಿನಲ್ಲಿ ನಕಲಿ ಬಂಗಾರದ ಆಭರಣಗಳನ್ನು ಅಡಮಾನ ಮಾಡಿ 2 ಕೋಟಿ ರೂ. ಗೂ ಅಧಿಕ ಸಾಲ ಮಂಜೂರು ಮಾಡಿಸಿ ಮೋಸ ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ಕಳವು ಮಾಡಿದ ಆಭರಣಗಳನ್ನು ನಗರದ ಫೆಡರಲ್ ಬ್ಯಾಂಕ್, ಫೆಡ್ ಬ್ಯಾಂಕ್ ಹಾಗೂ ಪಿ.ಬಿ.ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಫೈನಾನ್ಸ್ ಶಾಖೆಯಲ್ಲಿ ಅಡಮಾನ ಮಾಡಿ ಸಾಲ ಪಡೆದಿದ್ದ. ಇಷ್ಟು ಮೊತ್ತದ ಬಂಗಾರದ ಆಭರಣಗಳನ್ನು ಒಬ್ಬನೇ ವ್ಯಕ್ತಿ ಖಾಸಗಿ ಫೈನಾನ್ಸ್ಗಳಲ್ಲಿ ಅಡಮಾನ ಇಡಲು ಅವಕಾಶವಿಲ್ಲ. ಆದರೂ ಈ ಫೈನಾನ್ಸ್ ನವರು ನಿಯಮ ಮೀರಿರುವುದು ಕಂಡು ಬಂದಿದ್ದು, ಈ ಪ್ರಕರಣದಲ್ಲಿ ಅವರ ವಿರುದ್ಧವೂ ದೂರು ದಾಖಲಿಸಿ ತನಿಖೆ ನಡೆಸಲಾಗುವುದು ಎಂದರು.
ಪ್ರಕರಣದ ತನಿಖೆಗೆ ಖಾಸಗಿ ಫೈನಾನ್ಸ್ನವರು ಸಹಕಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ತಿಜೋರಿಗಳನ್ನು ಒಡೆಯಲಾಗಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಕ್ರಮಕ್ಕೆ ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿಗಳಾದ ವಿಜಯ್ ಕುಮಾರ್ ಸಂತೋಷ್,ಮಂಜುನಾಥ್, ಉಪಾಧೀಕ್ಷಕ ಶರಣ ಬಸವೇಶ್ವರ ಇತರರು ಉಪಸ್ಥಿತರಿದ್ದರು.