31 ಜಿಲ್ಲಾ ಕೇಂದ್ರಗಳಲ್ಲಿ ಸೆ.1ರಿಂದ ಅ.5ರ ವರೆಗೆ ʼಬಸವ ಸಂಸ್ಕೃತಿ ಅಭಿಯಾನʼ : ಸಾಣೇಹಳ್ಳಿ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ: ಸೆ.15ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ʼಬಸವ ಸಂಸ್ಕೃತಿ ಅಭಿಯಾನʼದ ಅಂಗವಾಗಿ ಮಂಗಳವಾರ ನಗರದ ಶಿವಯೋಗಾಶ್ರಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಭಿಯಾನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರಸ್ತುತ ರಾಜಕೀಯ, ಧಾರ್ಮಿಕ ವಾತಾವರಣ ತುಂಬಾ ಹದಗೆಟ್ಟಿದ್ದು, ಇದನ್ನು ಸುಸ್ಥಿತಿಗೆ ತರುವ ಆಶಯ ಇಟ್ಟುಕೊಂಡು ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದ 31 ಜಿಲ್ಲಾ ಕೇಂದ್ರಗಳಲ್ಲಿ ಸೆ.1 ರಿಂದ ಅ.5 ರವರೆಗೆ ನಡೆಯಲಿದೆ. ಬಸವಣ್ಣನ ಜನ್ಮಭೂಮಿಯಾದ ಬಸವನ ಬಾಗೇವಾಡಿಯಿಂದ ಆರಂಭವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಕ್ತಾಯ ಆಗಲಿದೆ ಎಂದರು.
ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಆಗಿ ಸರಕಾರ ಘೋಷಣೆ ಮಾಡಿ ವರ್ಷ ಕಳೆದಿದೆ. ಇದನ್ನು ಜನರು ಗಂಭೀರವಾಗಿ ಪರಿಗಣಿಸದೇ, ಬಸವಣ್ಣನವರ ತತ್ವ ಚಿಂತನೆಗಳನ್ನು ಪಾಲನೆ ಮಾಡದಿರುವುದನ್ನು ಮನಗಂಡು ಈ ಅಭಿಯಾನ ನಡೆಸಬೇಕು ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ ಈ ತೀರ್ಮಾನ ಕೈಗೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಈ ಅಭಿಯಾನದ ವೇಳೆ ಆಯಾಯ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ವಚನಗಳ ಸಂವಾದ ನಡೆಯಲಿದೆ. ಅನುಭವ ಮಂಟಪದ ಮಾದರಿಯಲ್ಲಿ ಪರಸ್ಪರ ಚರ್ಚೆಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ವಚನಗಳ ಮಹತ್ವ ತಿಳಿಸಿಕೊಡುವ ಪ್ರಯತ್ನ ಮಾಡಲಾಗುವುದು. ಸಂಜೆ ವಚನ ಪುಸ್ತಕಗಳೊಂದಿಗೆ ಪಾದಯಾತ್ರೆ ಇರಲಿದೆ ಎಂದರು.
ಅಭಿಯಾನದ ಗೌರವಾಧ್ಯಕ್ಷ ಅಥಣಿ ಎಸ್.ವೀರಣ್ಣ ಮಾತನಾಡಿ, ಈ ಹಿಂದೆ ರಾಜ್ಯ ಸರಕಾರ ಜಾತಿ ಗಣತಿ ನಡೆಸಿದಾಗ ಎಲ್ಲರೂ ಒಳಪಂಗಡದ ಹೆಸರು ಬರೆಸಿದ್ದರಿಂದ ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ನಡೆಸುವ ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತರು ಎಂದು ಬರೆಸಬೇಕು ಎಂಬ ಬಗ್ಗೆ ಎಲ್ಲ ಮಠಾಧೀಶರು ಸೇರಿ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬರಬೇಕು ಎಂದು ಕೋರಿದರು.
ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಕೆಲವರು ವೀರಶೈವ ಹಾಗೂ ಇನ್ನೂ ಕೆಲವರು ವೀರಶೈವ ಲಿಂಗಾಯತ ಎಂದು ಬರೆಸುವಂತೆ ಹೇಳುತ್ತಿದ್ದಾರೆ. ಲಿಂಗಾಯತ ಮಠಾಧೀಶರ ಒಕ್ಕೂಟದ ನಿಲುವು ಲಿಂಗಾಯತ ಎಂದೇ ಬರೆಸಲು ತೀರ್ಮಾನ ಕೈಗೊಂಡಿದೆ. ಅಖಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸರಿಯಾದ ತೀರ್ಮಾನ ಕೈಗೊಂಡರೆ ಸಮಸ್ಯೆ ಪರಿಹಾರ ಆಗಲಿದೆ ಎಂದು ಸಲಹೆ ನೀಡಿದರು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಸೆ.15 ರಂದು ದಾವಣಗೆರೆಗೆ ಬರಲಿದೆ. ರಾಜ್ಯದಲ್ಲಿಯೇ ಅದ್ದೂರಿಯಾಗಿ ನಡೆಸಿಕೊಟ್ಟ ಜಿಲ್ಲೆ ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಬೇಕು. ಬಸವ ತತ್ವಗಳಿಂದ ನಾಡು ಉಳಿದಿದೆ. ಬಸವ ತತ್ವದ ಅಡಿಯಲ್ಲಿ ನಾಡು ಕಟ್ಟೋಣ ಎಂದರು.
ಬಸವ ಸಂಸ್ಕತಿ ಅಭಿಯಾನದ ಅಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿದರು.
ಸಭೆಯಲ್ಲಿ ಎಂ.ಜಯಕುಮಾರ್, ದೇವರ ಮನಿ ಶಿವಕುಮಾರ್, ಕುಸುಮಾ ಲೋಕೇಶ್ ಸೇರಿದಂತೆ ಸಮಾಜದ ನೂರಕ್ಕೂ ಅಧಿಕ ಮುಖಂಡರು ಬಸವ ಅನುಯಾಯಿಗಳು ಭಾಗವಹಿಸಿದ್ದರು.