ಏಳುಮಲೆಗೆ ಏಳುಬೀಳುಗಳ ರೋಚಕ ಪ್ರೇಮ ಪಯಣ

ಚಿತ್ರ: ಏಳುಮಲೆ
ನಿರ್ದೇಶನ: ಪುನೀತ್ ರಂಗಸ್ವಾಮಿ
ನಿರ್ಮಾಣ: ತರುಣ್ ಸುಧೀರ್, ಅಟ್ಲಾಂಟ ನಾಗೇಂದ್ರ
ತಾರಾಗಣ: ರಾಣಾ, ಪ್ರಿಯಾಂಕಾ ಆಚಾರ್, ಕಿಶೋರ್ ಮೊದಲಾದವರು.
ಇದು ಎರಡು ದಶಕದ ಹಿಂದೆ ನಡೆದಿರಬಹುದಾದ ಕಥೆ. ಎರಡು ರಾಜ್ಯಗಳ ಪ್ರೇಮಿಗಳು ಏಳುಮಲೆಯ ಮಾದಪ್ಪನ ಬೆಟ್ಟದಲ್ಲಿ ಒಂದಾಗಲು ಪಯಣಿಸುವ ಕಥೆ. ಆದರೆ ಒಂದಾಗಬೇಕಾದ ಜೋಡಿಗಿಂತ ಎದುರಾಗಿ ನಿಂತ ಸಂಕಷ್ಟಗಳೇ ಕಥೆಯಾಗುತ್ತಾ ಸಾಗುವ ಸಿನೆಮಾ ಇದು. ಎದುರಾಗುವ ಸಮಸ್ಯೆಗಳೇನು ಎನ್ನುವುದೇ ಚಿತ್ರದ ಪ್ರಮುಖ ಅಂಶ. ಕೊನೆಗೂ ದಾಂಪತ್ಯದಲ್ಲಿ ಒಂದಾಗುತ್ತಾರೆಯೇ ಅಥವಾ ಮಾದಪ್ಪನ ಪಾದದಲ್ಲಿ ಒಂದಾಗುತ್ತಾರೆಯೇ? ಎನ್ನುವ ಕುತೂಹಲ ಚಿತ್ರದ ಕೊನೆಯವರೆಗೂ ಉಳಿದುಕೊಳ್ಳುತ್ತದೆ.
ಕಥೆ ಶುರುವಾಗುವುದು ಸುಂದರವಾದ ಊಟಿಯ ರಸ್ತೆಗಳಲ್ಲಿ. ಆದರೆ ರಸ್ತೆಯ ಭಯಾನಕ ತಿರುವುಗಳಂತೆ ಆರಂಭದಿಂದಲೇ ಟ್ವಿಸ್ಟ್ ಗಳ ಸುರಿಮಳೆಯಾಗುತ್ತದೆ. ಬಾಡಿಗೆ ಕ್ಯಾಬ್ ಚಲಾಯಿಸುವ ಹರೀಶನೇ ಇಲ್ಲಿನ ಕಥಾ ನಾಯಕ. ಆತನ ಗಮನ ಎಲ್ಲವೂ ತನ್ನ ಕೈನಲ್ಲಿದ್ದ ಪುಟ್ಟ ಮೊಬೈಲ್ನಲ್ಲೇ ಕೇಂದ್ರೀಕರಿಸಿರುತ್ತದೆ. ಯಾಕೆಂದರೆ ಆ ರಾತ್ರಿ ಕಳೆದರೆ ತಮಿಳುನಾಡಿನ ಸೇಲಂನಲ್ಲಿರುವ ಈತನ ಪ್ರೇಯಸಿಗೆ ಮದುವೆ! ರೇವತಿ ಅವಳ ಹೆಸರು. ಮದುವೆ ಮನೆಯಿಂದ ತಪ್ಪಿಸಿ ಮೈಸೂರಿಗೆ ಬರುವೆನೆಂದು ಹೊರಟಾಕೆಗೆ ಕೊನೆಯ ಬಸ್ಸೇ ತಪ್ಪಿ ಹೋಗಿದೆ. ಸಿಕ್ಕ ಬಸ್ಸಲ್ಲಿ ಏಳುಮಲೆ ಮಾದಪ್ಪನ ಬೆಟ್ಟಕ್ಕೆ ಹೊರಟಿದ್ದಾಳೆ. ಆದರೆ ಆಕೆಗೂ ಹರೀಶನಿಗೂ ಈ ಪಯಣದಲ್ಲಿ ಎದುರಾಗುವುದು ಅನಿರೀಕ್ಷಿತ ವಿಘ್ನಗಳ ಸರಮಾಲೆ.
ಹರೀಶನಾಗಿ ನಟಿಸಿರುವ ರಾಣಾ ತಮ್ಮ ಪಾತ್ರಕ್ಕೆ ಜೀವ ನೀಡುವಂತೆ ನಟಿಸಿದ್ದಾರೆ. ಮೊಬೈಲ್ ರೇಂಜ್ಗಾಗಿ ಪರದಾಡುವಲ್ಲಿಂದ ಹಿಡಿದು, ತನ್ನ ಹುಡುಗಿಗೆ ಎದುರಾಗುವ ಅಪಾಯವನ್ನು ತಡೆಯಲು ಯತ್ನಿಸುವ ತನಕ ತನ್ನಲ್ಲಿನ ಎಲ್ಲ ಹಪಾಹಪಿಯನ್ನು ವ್ಯಕ್ತಪಡಿಸಿರುವ ರೀತಿ ಅನನ್ಯ. ರಾಣಾ ಈ ಹಿಂದಿಗಿಂತ ನಟನೆಯಲ್ಲಿ ಪಕ್ವಗೊಂಡಿರುವಂತೆ ಕಾಣಿಸಿದ್ದಾರೆ. ಹರೀಶನ ಮೇಲಿನ ಉತ್ಕಟ ಪ್ರೀತಿಯಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಕಥಾ ನಾಯಕಿ ರೇವತಿಯಾಗಿ ಪ್ರಿಯಾಂಕಾ ಆಚಾರ್ ಉತ್ತಮ ನಟನೆ ನೀಡಿದ್ದಾರೆ. ಮೊದಲ ಚಿತ್ರದಲ್ಲೇ ಭಯ, ಆತಂಕ ತುಂಬಿದ ಮುದ್ದು ಮುಖದೊಂದಿಗೆ ಚಂದನವನದಲ್ಲಿ ತಮ್ಮದೊಂದು ಸ್ಥಾನ ಭದ್ರಗೊಳಿಸಿದ್ದಾರೆ ಪ್ರಿಯಾಂಕಾ. ಕೇವಲ ನಾಯಕ, ನಾಯಕಿ ಮಾತ್ರವಲ್ಲದೆ ಚಿತ್ರದ ಪ್ರತಿಯೊಂದು ಪಾತ್ರಗಳನ್ನು ಕೂಡ ಅದ್ಭುತವಾಗಿ ತೋರಿಸುವಲ್ಲಿ, ಬಳಸಿಕೊಳ್ಳುವಲ್ಲಿ ನವ ನಿರ್ದೇಶಕ ಪುನೀತ್ ರಂಗಸ್ವಾಮಿ ಯಶಸ್ವಿಯಾಗಿದ್ದಾರೆ. ಅದಕ್ಕೆ ತಕ್ಕಂತೆ ಕಥೆಯೂ ಜೊತೆ ನೀಡಿದೆ.
ರಿಯಾಲಿಟಿ ಶೋಗಳಲ್ಲಿ ಹಾಸ್ಯರಸದಿಂದಲೇ ಗಮನ ಸೆಳೆದ ಜಗ್ಗಪ್ಪ ಇಲ್ಲಿ ನಾಯಕನ ಸಂಕಷ್ಟಕ್ಕೆ ಕಾರಣವಾಗುತ್ತಾರೆ. ಪ್ರೇಕ್ಷಕರನ್ನು ಕೆರಳುವಂತೆ ಮಾಡುವಲ್ಲಿ ಜಗ್ಗಪ್ಪ ಗೆದ್ದಿದ್ದಾರೆ. ಮತ್ತೊಂದು ಕಡೆ ಟಿ.ಎಸ್. ನಾಗಾಭರಣರ ಪಾತ್ರವೂ ನೈಜವಾಗಿ ಮೂಡಿ ಬಂದಿದೆ. ಹೆಚ್ಚಾಗಿ ಕಾಣಿಸುವ ಕಿಶೋರ್ ಇಲ್ಲಿಯೂ ಪೊಲೀಸ್ ಪಾತ್ರ ನಿಭಾಯಿಸಿದ್ದಾರೆ. ಆದರೆ ತನ್ನ ಪ್ರತಿಯೊಂದು ವರ್ತನೆಯಲ್ಲೂ ಕಥಾಗತಿಯನ್ನೇ ಬದಲಾಯಿಸುವಂಥ ಹಿಡಿತ ಈ ಪಾತ್ರಕ್ಕಿದೆ. ಇದೇ ಕಾರಣದಿಂದಲೇ ಈ ಹಿಂದಿನ ಎಲ್ಲ ಪೊಲೀಸ್ ಪಾತ್ರಗಳಿಗೆ ಮುಕುಟ ಪ್ರಾಯವಾದ ಅಧಿಕಾರಿಯಂತೆ ಮೆರೆದಿದ್ದಾರೆ.
ಕನ್ನಡದ ಅನಾಥ ಹುಡುಗ ಮತ್ತು ಪರರಾಜ್ಯದ ಶ್ರೀಮಂತ ಹುಡುಗಿ ಮಧ್ಯದ ಪ್ರೀತಿ ಅಂದಾಗಲೇ, ಒಂದು ಸಿದ್ಧಮಾದರಿಯ ಆತಂಕವನ್ನು ಪ್ರೇಕ್ಷಕ ನಿರೀಕ್ಷೆ ಮಾಡಿರುತ್ತಾನೆ. ಅದರಲ್ಲೂ ಆಯುಧಗಳ ಅಕ್ರಮ ಸಾಗಾಟ, ಹಿಟ್ ಆಂಡ್ ರನ್ ಪ್ರಕರಣ ಮುಂತಾದವೆಲ್ಲ ಮುಗಿಬಿದ್ದಾಗ ಪರಿಸ್ಥಿತಿ ಹೇಗಾಗಬೇಡ? ಅಮಾಯಕ ಪ್ರೇಮಿ ಸಂಬಂಧವೇ ಇರದಂಥ ಅಪಾಯದಲ್ಲಿ ಸಿಲುಕುವುದನ್ನು ಎ.ಕೆ.47ನಲ್ಲಿ ನೋಡಿದ್ದೇವೆ. ಇಲ್ಲಿಯೂ ಕೂಡ ಅಂಥದೇ ಒಂದು ನೈಜ ಘಟನೆಯ ಹಿನ್ನೆಲೆಯನ್ನು ಬಳಸಿಕೊಳ್ಳಲಾಗಿದೆ. ಕುಖ್ಯಾತ ಕಾಡುಗಳ್ಳನ ಕೊನೆಯ ಕ್ಷಣಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಪ್ರೇಮಕಥೆಯೊಳಗೆ ಈ ಘಟನೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರದಂತೆ ಎರಗುವ ಅಪಾಯವಿದ್ದರೂ ಎಲ್ಲವನ್ನೂ ಮೀರುವಂತೆ ಪ್ರೇಮಿಗಳ ಕಥೆಗೆ ಆಕರ್ಷಕ ಕ್ಲೈಮ್ಯಾಕ್ಸ್ ನೀಡಲಾಗಿದೆ. ಮತ್ತೊಂದೆಡೆ ಕಾಡುಗಳ್ಳನಿಗೆ ಹಾಕಿದ ಟ್ರ್ಯಾಪ್ ಕೂಡ ಡಮ್ಮಿಯಾಗದಂತೆ ಟಾಲಿವುಡ್ ನಟ ಜಗಪತಿ ಬಾಬು ನಟನೆಯನ್ನು ಬಳಸಿಕೊಳ್ಳಲಾಗಿದೆ.
ಡಿ. ಇಮಾನ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಕಥೆಯೊಂದಿಗೆ ಸೇರಿ ಸಾಗುತ್ತವೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಎಂ.ಪಿ. ಪ್ರಕಾಶ್ ಸಂಕಲನ ಕೂಡ ಏಳುಮಲೆಗೆ ಶಕ್ತಿ ತಂದುಕೊಟ್ಟಿವೆ. ಎಲ್ಲ ರೀತಿಯಿಂದಲೂ ಸಂತೃಪ್ತಿ ತರುವ ಚಿತ್ರವಾಗಿ ಏಳುಮಲೆ ಮೂಡಿಬಂದಿದೆ.
ಆರಂಭದಲ್ಲಿನ ತೆಲುಗು, ತಮಿಳು ಸಂಭಾಷಣೆಗಳನ್ನು ಗಮನಿಸಿ ಕನ್ನಡ ಅಭಿಮಾನಿಗಳು ರೊಚ್ಚಿಗೇಳಬಹುದು. ಬಹುಶಃ ಇದೇ ಕಾರಣಕ್ಕೇನೋ ಕೊನೆಯಲ್ಲಿ ತಮಿಳರೇ ಪರಸ್ಪರ ಕನ್ನಡ ಮಾತನಾಡುವ ವಿರೋಧಾಭಾಸವೂ ಇದೆ. ಆದರೆ ನಮ್ಮದೇ ಚಾಮರಾಜನಗರದ ಭಾಷೆಯನ್ನು ಚೆನ್ನಾಗಿ ಬಳಸಿದ್ದಾರೆ ಎನ್ನುವುದಕ್ಕಾಗಿ ಮೆಚ್ಚಲೇಬೇಕು.
ಎರಡು ದಶಕದ ಹಿಂದಿನ ಕಥೆಯನ್ನು ಹೇಳುವಾಗ ಬಳಕೆಯಾಗಿರುವ ವಸ್ತುಗಳಲ್ಲಿ ಕಲಾನಿರ್ದೇಶಕರ ನೈಪುಣ್ಯತೆ ಎದ್ದು ಕಾಣುತ್ತದೆ. ಥ್ರಿಲ್ಲರ್ ಮಾದರಿಯ ಸಿನೆಮಾ ಪ್ರಿಯರು ಮರೆಯದೇ ನೋಡಬೇಕಾದ ಸಿನೆಮಾ ಇದು.