ಪರೇಶ್ ರಾವಲ್ ವಿರುದ್ಧ 25 ಕೋಟಿ ರೂ.ಗಳ ಮೊಕದ್ದಮೆ ಹೂಡಿದ ಅಕ್ಷಯ್ ಕುಮಾರ್: ವರದಿ

ಪರೇಶ್ ರಾವಲ್ / ಅಕ್ಷಯ್ ಕುಮಾರ್ (Photo credit: PTI)
ಮುಂಬೈ: ʼಹೇರಾ ಫೇರಿʼ ಸರಣಿಯಿಂದ ನಿರ್ಗಮಿಸುತ್ತಿರುವುದಾಗಿ ಹಿರಿಯ ನಟ ಪರೇಶ್ ರಾವಲ್ ಹೇಳಿದ್ದು, ಚಿತ್ರದ ನಿರ್ಮಾಪಕರಾದ ಅಕ್ಷಯ್ ಕುಮಾರ್ ಅವರು ಇದೀಗ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ನಿರ್ಮಾಣ ಸಂಸ್ಥೆ ಕೇಪ್ ಆಫ್ ಗುಡ್ ಫಿಲ್ಮ್ಸ್ ಮೂಲಕ ನಟ ಪರೇಶ್ ರಾವಲ್ ಅವರಿಗೆ 25 ಕೋಟಿ ರೂ.ಗಳ ಪರಿಹಾರ ಕೋರಿ ಕಾನೂನು ನೋಟಿಸ್ ಕಳುಹಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಪರೇಶ್ ಅವರು ಕಳೆದ ವಾರ ಮಾಧ್ಯಮಗಳ ಮೂಲಕ ತಾವು ಕಾಮಿಡಿ ಚಿತ್ರದಿಂದ ನಿರ್ಗಮಿಸುತ್ತಿರುವುದಾಗಿ ದೃಢಪಡಿಸಿದ್ದರು. ಕಾರಣ ಸ್ಪಷ್ಟವಾಗಿಲ್ಲದಿದ್ದರೂ, ಅವರು ಈಗ ಚಿತ್ರದ ಭಾಗವಾಗಲು ಇಚ್ಚಿಸುತ್ತಿಲ್ಲ ಎಂದು ಹೇಳಿದ್ದರು. ಇದು ಹೇರಾ ಫೆರಿ ಸರಣಿಯ ಅಭಿಮಾನಿಗಳಲ್ಲಿ ನಿರಾಶೆಗೆ ಕಾರಣವಾಗಿದೆ.
ಚಿತ್ರದ ಪ್ರಮುಖ ನಟರಾದ ಅಕ್ಷಯ್, ಸುನೀಲ್ ಶೆಟ್ಟಿ ಮತ್ತು ಪರೇಶ್ ಈ ವರ್ಷದ ಎಪ್ರಿಲ್ನಲ್ಲಿ ಹಿರಿಯ ನಿರ್ದೇಶಕ ಪ್ರಿಯದರ್ಶನ್ ಅವರ ನೇತೃತ್ವದಲ್ಲಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದರು. ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ಅವರಿಂದ ಕಾನೂನುಬದ್ಧವಾಗಿ ಹೇರಾ ಫೆರಿ 3 ಚಿತ್ರದ ಹಕ್ಕುಗಳನ್ನು ಖರೀದಿಸಿದ ಬಳಿಕ ಅಕ್ಷಯ್ ಕೂಡ ಹೇರಾ ಫೆರಿ 3 ಚಿತ್ರದ ನಿರ್ಮಾಪಕರಾಗಿದ್ದಾರೆ.
ಅವರ ಹಠಾತ್ ನಿರ್ಗಮನಕ್ಕೆ ನಿರ್ದಿಷ್ಟ ಕಾರಣ ಏನು ಅನ್ನುವುದು ಸ್ಪಷ್ಟವಾಗದಿದ್ದರೂ, ತಮ್ಮ ನಿರ್ಧಾರಕ್ಕೆ ಸೃಜನಶೀಲ ವ್ಯತ್ಯಾಸಗಳು ಅಥವಾ ಸಂಭಾವನೆ ಕಾರಣವಲ್ಲ ಎಂದು ಪರೇಶ್ ರಾವಲ್ ಅವರು ಸ್ಪಷ್ಟಪಡಿಸಿದ್ದರು. ಮೂಲಗಳ ಪ್ರಕಾರ ಈ ಚಿತ್ರಕ್ಕಾಗಿ ರಾವಲ್ ಅವರಿಗೆ ನೀಡಲಾಗುತ್ತಿದ್ದ ಸಂಭಾವನೆಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ ನೀಡಲು ನಿರ್ಮಾಪಕರು ತಯಾರಿದ್ದರು ಎನ್ನಲಾಗಿದೆ.
ಈ ಬಗ್ಗೆ ಕಾನೂನು ಪ್ರಕ್ರಿಯೆಗೆ ಮುಂದಾಗಿರುವ ಅಕ್ಷಯ್ ಕುಮಾರ್ ನಿರ್ಮಾಣ ಸಂಸ್ಥೆ, "ಪರೇಶ್ ವೃತ್ತಿಪರ ಸಮಗ್ರತೆ ಅಥವಾ ವಾಣಿಜ್ಯ ನೈತಿಕತೆಯ ಬಗ್ಗೆ ಸ್ಪಷ್ಟವಾದ ನಿರ್ಲಕ್ಷ್ಯ ವಹಿಸಿದ್ದಾರೆ. ಅವರು ಚಿತ್ರದ ಭಾಗವಾಗದಿರಲು ಬಯಸಿದರೆ, ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಹೇಳಬೇಕಿತ್ತು, ಒಪ್ಪಂದಕ್ಕೆ ಸಹಿ ಹಾಕಿ ಮೊತ್ತವನ್ನು ಸ್ವೀಕರಿಸಿ ನಿರ್ಮಾಪಕರು ಚಿತ್ರೀಕರಣಕ್ಕೆ ಇಷ್ಟೊಂದು ಹಣವನ್ನು ಖರ್ಚು ಮಾಡಿದ ಬಳಿಕ ಇಂತಹ ನಿರ್ಧಾರ ತಳೆಯುವುದು ಸರಿಯಲ್ಲ" ಎಂದು ಅಭಿಪ್ರಾಯ ಹೊಂದಿರುವುದಾಗಿ ಸಂಸ್ಥೆಯ ಮೂಲಗಳು ಹೇಳಿವೆ.
ಪರೇಶ್, ಅವರು ಹಠಾತ್ ಆಗಿ ಚಲನಚಿತ್ರಗಳನ್ನು ತ್ಯಜಿಸುವುದು ಹೊಸದೇನಲ್ಲ. 2023 ರಲ್ಲಿ ಓ ಮೈ ಗಾಡ್ 2 ಚಿತ್ರಕಥೆ ಇಷ್ಟವಾಗಲಿಲ್ಲ ಎಂದು ಹೇಳಿ ಅವರು ಚಿತ್ರದಿಂದ ಹೊರ ಬಂದಿದ್ದರು. 2009 ರ ಆರಂಭದಲ್ಲಿ, ಅವರು ಶಾರುಖ್ ಖಾನ್ ಅವರ ಬಿಲ್ಲು ಬಾರ್ಬರ್ ಚಿತ್ರಕ್ಕೆ ಒಪ್ಪಿಕೊಂಡ ನಂತರ ಅಲ್ಲಿಂದ ಹೊರನಡೆದಿದ್ದರು ಎಂದು ಮೂಗಳು ಹೇಳಿವೆ, ಆ ಚಿತ್ರವನ್ನೂ ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ.