ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ; ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಚಾಲಕ ಮೃತ್ಯು
ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ಹೆಚ್ಚಿದ ನೀರಿನ ಹರಿವು

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆಯ ಆರ್ಭಟ ಸೋಮವಾರವೂ ಮುಂದುವರಿದಿದೆ. ಸೋಮವಾರ ಬೆಳಗ್ಗೆ ಹಾಗೂ ಸಂಜೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಗೊಂಡಿದ್ದು, ಪ್ರಮುಖ ನದಿಗಳಲ್ಲಿ ನೀರಿನ ಹರಿವಿನಲ್ಲಿ ಭಾರೀ ಏರಿಕೆಯಾಗಿದೆ.
ರವಿವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಆಟೊ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಆಟೊ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ರವಿವಾರ ರಾತ್ರಿ ಸುರಿದ ಮಳೆಗೆ ಮೂಡಿಗೆರೆ ತಾಲೂಕಿನ ಬಾಳೂರು ಎಸ್ಟೇಟ್ ಎಂಬಲ್ಲಿ ಲೈನ್ ಮನೆಯೊಂದರ ಮೇಲೆ ಮರ ಉರುಳಿ ಬಿದ್ದು, ಮನೆಯಲ್ಲಿದ್ದ ಇಬ್ಬರಿಗೆ ಗಾಯವಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ತಾಲೂಕುಗಳಲ್ಲಿರುವ ಅಂಗನವಾಡಿಗಳಿಗೆ ಮೂರು ದಿನಗಳ ಕಾಲ ರಜೆ ಘೋಷಿಸಲಾಗಿದೆ.
ಹವಾಮಾನ ವೈಫರೀತ್ಯದ ಪರಿಣಾಮ ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಭಾರೀ ಮಳೆ ಸುರಿಯುತ್ತಿದ್ದು, ಮಳೆಯ ಆರ್ಭಟ ಸೋಮವಾರವೂ ಮುಂದುವರಿದಿದೆ. ಸೋಮವಾರ ಬೆಳಗ್ಗೆ ಹಾಗೂ ಸಂಜೆ ವೇಳೆ ಎಡಬಿಡದೇ ಸುರಿದ ಮಳೆ ಮಧ್ಯಾಹ್ನದ ವೇಳೆ ಕೊಂಚ ಬಿಡುವು ನೀಡಿತ್ತು. ಜಿಲ್ಲೆಯ ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಾದ್ಯಂತ ಸೋಮವಾರ ಬೆಳಗ್ಗೆ ಹಾಗೂ ಸಂಜೆ ವೇಳೆ ಧಾರಾಕಾರ ಮಳೆಯಾಗಿದ್ದು, ಮಳೆಯಿಂದಾಗಿ ನೂರಾರು ಮರಗಳು, ವಿದ್ಯುತ್ ಕಂಬಗಳು ಧರಾಶಹಿಯಾಗಿದ್ದು, ನೂರಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಗೆ ರಸ್ತೆ ಮೇಲೆ ಮರಗಳು ಉರುಳಿಬಿದ್ದ ಪರಿಣಾಮ ಜನ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿತ್ತು.
ಸೋಮವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಕಳಸ ಪಟ್ಟಣದ ಮುಖ್ಯ ರಸ್ತೆ ಬದಿಯ ಚರಂಡಿಗಳಲ್ಲಿ ನೀರು ನಿಂತ ಪರಿಣಾಮ ಮಳೆ ನೀರು ರಸ್ತೆ ಮೇಲೆ ಹರಿದಿದ್ದರಿಂದ ಜನ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿತ್ತು. ಸಾರ್ವಜನಿಕರ ಹಿಡಿಶಾಪದ ಬಳಿಕ ಕಳಸ ಗ್ರಾಪಂ ಅಧಿಕಾರಿ, ಸಿಬ್ಬಂದಿ ಚರಂಡಿಯಲ್ಲಿದ್ದ ಹೂಳು, ತ್ಯಾಜ್ಯ ತೆಗೆದು ನೀರು ಹರಿಯುವಂತೆ ಮಾಡಿದ್ದಾರೆ. ತಾಲೂಕಿನ ಇಡಕಣಿ ಗ್ರಾಪಂ ವ್ಯಾಪ್ತಿಯ ಚೆನ್ನಡ್ಲು ಗ್ರಾಮದಲ್ಲಿ ಧರೆ ಕುಸಿದು ರಸ್ತೆ ಮೇಲೆ ಮಣ್ಣು ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಸ್ಥಳೀಯರು ಶ್ರಮದಾನದ ಮೂಲಕ ರಸ್ತೆ ಮೇಲೆ ಬಿದ್ದಿದ್ದ ಮಣ್ಣು ತೆರವು ಮಾಡಿದ್ದಾರೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಭಾಗದಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಜಡಿ ಮಳೆ ಹಾಗೂ ಧಟ್ಟ ಮಂಜಿನ ಪರಿಣಾಮ ವಾಹನಗಳು ಅತ್ಯಂತ ಜಾಗರೂಕತೆಯಿಂದ ನಿಧಾನಗತಿಯಲ್ಲಿ ಸಂಚರಿಸುವಂತಾಗಿದೆ. ರಸ್ತೆ ಬದಿಯಲ್ಲಿ ಬೆಟ್ಟಗಳಿಂದ ಹರಿದು ಬರುತ್ತಿರುವ ಮಳೆ ನೀರಿನಿಂದಾಗಿ ಅಲ್ಲಲ್ಲಿ ಝರಿ, ಜಲಪಾತಗಳು ಉಂಟಾಗಿದ್ದು, ಕಲ್ಲು, ಮಣ್ಣು ರಸ್ತೆ ಮೇಲೆ ಉರುಳಿ ಬೀಳುತ್ತಿವೆ.
ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಭಾರೀ ಮಳೆ ಪರಿಣಾಮ ಪ್ರಮುಖ ನದಿಗಳಾದ ಭದ್ರಾ, ತುಂಗಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವಿನಲ್ಲಿ ಭಾರೀ ಏರಿಕೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ.
ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದರೆ, ಚಿಕ್ಕಮಗಳೂರು, ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದ್ದರೆ, ಉಳಿದಂತೆ ಮಳೆ ಕೊಂಚ ಬಿಡುವು ನೀಡಿದೆ.
ಅಂಗನವಾಡಿಗಳಿಗೆ 3 ದಿನ ರಜೆ ಘೋಷಣೆ :
ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಕಾರಣಕ್ಕೆ ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ ತಾಲೂಕಿನ ಎಲ್ಲ ಅಂಗನವಾಡಿಗಳಿಗೆ ಸೋಮವಾರದಿಂದ ಬುಧವಾರದವರೆಗೆ 3 ದಿನ ರಜೆ ಘೋಷಣೆ ಮಾಡಲಾಗಿದೆ.
ಚಲಸುತ್ತಿದ್ದ ಆಟೋ ರಿಕ್ಷಾದ ಮೇಲೆ ಮರ ಉರುಳಿ ಬಿದ್ದು ಚಾಲಕ ಮೃತ್ಯು: ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಭಾರೀ ಗಾತ್ರದ ಮರ ಮುರಿದು ಬಿದ್ದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮ ಸಮೀಪದ ಜಾಳ್ಮರ ಎಂಬಲ್ಲಿ ರವಿವಾರ ಸಂಜೆ ವರದಿಯಾಗಿದೆ.
ಮೃತ ಆಟೊ ಚಾಲಕನನ್ನು ರತ್ನಾಕರ(38) ಎಂದು ಗುರುತಿಸಲಾಗಿದೆ. ಕೊಪ್ಪ ತಾಲೂಕಿನಾದ್ಯಂತ ರವಿವಾರ ಭಾರೀ ಗಾಳಿ, ಮಳೆಯಾಗಿದ್ದು, ಆಟೊ ಚಾಲಕ ರತ್ನಾಕರ ಬಾಡಿಗೆ ಹೋಗಿ ಮನೆಗೆ ಹಿಂದುರುಗುತ್ತಿದ್ದ ವೇಳೆ ಭಾರೀ ಗಾಳಿ ಹಾಗೂ ಮಳೆಯಿಂದಾಗಿ ಮರ ಆಟೊ ರಿಕ್ಷಾದ ಮೇಲೆ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಆಟೊ ಚಾಲಕನ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಸೇರಿದಂತೆ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಇಬ್ಬರು ಮೃತಪಟ್ಟಂತಾಗಿದ್ದು, ಕೆಲ ದಿನಗಳ ಹಿಂದೆ ಸಿಡಿಲು ಬಡಿದು ಕುರಿಗಾಹಿಯೊಬ್ಬರು ಮೃತಪಟ್ಟಿದ್ದಾರೆ.