ಸರಕಾರದ ಎರಡು ವರ್ಷಗಳ ಸಾಧನೆ ಶೂನ್ಯ: ಸಿ.ಟಿ. ರವಿ

ಚಿಕ್ಕಮಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 2 ವರ್ಷ ಆಗುತ್ತಿದ್ದು, ಸರಕಾರದ ಎರಡು ವರ್ಷಗಳ ಸಾಧನೆ ಶೂನ್ಯವಾಗಿದೆ. ಸರಕಾರದ ಸಾಧನೆ ಕೇವಲ ಜಾಹೀರಾತುಗಳಿಗೆ ಮಾತ್ರ ಸೀಮಿತವಾಗಿದೆ. ಎರಡು ವರ್ಷಗಳ ಸಾಧನೆಯ ಸಂಭ್ರಮಾಚರಣೆ ಮಾಡಲು ಸರಕಾರ ಜನರ ತೆರಿಗೆ ಹಣ ಬಳಸಿಕೊಳ್ಳುತ್ತಿದೆ. ಪಂಚಗ್ಯಾರಂಟಿ ಸಮಾವೇಶ ಸರಕಾರದ ಸಾಧನೆಯ ಸಾಮವೇಶ ಅಲ್ಲ, ಜನರ ದುಡ್ಡಿನಲ್ಲಿ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಜಾತ್ರೆಯಾಗಿದೆ ಎಂದು ವಿಪ ಸದಸ್ಯ ಸಿ.ಟಿ.ರವಿ ಟೀಕಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರಕಾರ ತನ್ನ ಎರಡು ವರ್ಷಗಳ ಆಡಳಿತದಲ್ಲಿ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆದರೂ ರಾಜ್ಯ ಸರಕಾರ ತನ್ನ ಎರಡು ವರ್ಷಗಳ ಸಾಧನೆಯ ಬಗ್ಗೆ ಸಂಭ್ರಮಾಚರಣೆ ಮಾಡಲು ಸಮಾವೇಶ ಮಾಡುತ್ತಿದ್ದು, ಈ ಸಮಾವೇಶವನ್ನು ಜನರ ತೆರಿಗೆ ಹಣದಲ್ಲಿ ಮಾಡಲು ಹೊರಟಿರುವುದು ನಾಚಿಕೆಗೇಡು, ಈ ಸಮಾವೇಶ ಕಾಂಗ್ರೆಸ್ ಪಕ್ಷ ಜನರ ತೆರಿಗೆ ಹಣದಲ್ಲಿ ಮಾಡುತ್ತಿರುವ ಜಾತ್ರೆಯಾಗಿದೆ ಎಂದರು.
ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಅವಧಿಯಲ್ಲಿ 64 ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿ ಜನರ ಸಂಕಷ್ಟವನ್ನು ಹೆಚ್ಚಿಸಿದೆ. ಮೂಡಾ ಹಗರಣ, ವಾಲ್ಮೀಕಿ ಹಗರಣ, ಸ್ಮಾರ್ಟ್ ಮೀಟರ್ ಹಗರಣ ಸೇರಿದಂತೆ ಗುತ್ತಿಗೆದಾರರಿಂದ ಶೇ.60 ಕಮಿಶನ್ ಸರಕಾರ ಎಂಬ ಕುಖ್ಯಾತಿಗೂ ಪಾತ್ರವಾಗಿದೆ ಎಂದ ಅವರು, ರಾಜ್ಯದ ಜನರಿಗೆ ಸಾಮಾಜಿಕ ನ್ಯಾಯ ನೀಡುವುದಾಗಿ ಹೇಳಿಕೊಂಡಿದ್ದ ರಾಜ್ಯ ಸರಕಾರ ರಾಜ್ಯದಲ್ಲಿ ಸಾಮಾಜಿಕ ಕ್ಷೋಭೆಯನ್ನುಸೃಷ್ಟಿ ಮಾಡಿದೆ, ಜಾತಿಜಾತಿಗಳ ನಡುವಿನ ಸಂಬಂಧವನ್ನು ಹಾಳು ಮಾಡಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಕಾಂತರಾಜ ವರದಿ ಅನುಷ್ಠಾನ, ಜಯಪ್ರಕಾಶ್ ಹೆಗ್ಡೆ ವರದಿ ಜಾರಿಗೆ ನಿರ್ಲಕ್ಷ್ಯವಹಿಸುವ ಮೂಲಕ ಸಾಮಾಜಿಕ ನ್ಯಾಯ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂದು ದೂರಿದರು.
ರಾಜ್ಯ ಸರಕಾರದ ಆಡಳಿತದ ಅವಧಿಯಲ್ಲಿ 3ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರಕಾರದ ಅವಧಿಯಲ್ಲಿ ಅತೀ ಹೆಚ್ಚು ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಈ ಸರಕಾರದ ಅವಧಿಯಲ್ಲಿ 736 ಬಾಣಂತಿಯರು, ಸಾವಿರಕ್ಕೂ ಹೆಚ್ಚು ನವಜಾತ ಶಿಶುಗಳು ಮರಣಹೊಂದಿವೆ ಎಂದ ಅವರು, ರಾಜ್ಯ ಸರಕಾರ 2 ವರ್ಷಗಳ ಅವಧಿಯಲ್ಲಿ 7,64,655 ಕೋಟಿ ಸಾಲ ಮಾಡಿದ್ದು, ಸರಕಾರ ಸಾಲದ ಸುಳಿಯಲ್ಲಿ ಸಿಲುಕಿದೆ. ಸಿಎಂ ಸಿದ್ದರಾಮಯ್ಯ ಅವರು ಅತೀ ಹೆಚ್ಚು ಸಾಲ ಮಾಡಿದ ಅಪಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ದೂರಿದರು.
ರಾಜ್ಯ ಸರಕಾರ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಕ್ರಿಮಿನಲ್ ಮತ್ತು ಕಮ್ಯೂನಲ್ ಶಕ್ತಿಗಳು ಮೇಲುಗೈ ಸಾಧಿಸುತ್ತಿವೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಕೊಲೆ ಸುಲಿಗೆ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಾಗಿವೆ ಎಂದ ಅವರು, ಪಂಚಗ್ಯಾರಂಟಿ ಯೋಜನೆಗಳು ಪಂಚರ್ ಆಗಿದ್ದು, ಸಮರ್ಪಕವಾಗಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲೂ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರಕಾರ ದಿವಾಳಿಯಾಗಿರುವುದರಿಂದ ಪಂಚಗ್ಯಾರಂಟಿಗಳಿಗೂ ಸರಕಾರದ ಬಳಿ ಹಣವಿಲ್ಲದಂತಾಗಿದೆ, ಸರಕಾರಿ, ಅರೆ ಸರಕಾರಿ ನೌಕರರು ವೇತನ ನೀಡಲು ಸರಕಾರದ ಬಳಿ ಹಣವಿಲ್ಲ, ಗುತ್ತಿಗೆದಾರರು ಮಾಡಿದ ಕೆಲಸಕ್ಕೂ ಅನುದಾನ ನೀಡುತ್ತಿಲ್ಲ. ರಸ್ತೆಗಳ ಗುಂಡಿ ಮುಚ್ಚಲೂ ಸರಕಾರದಿಂದ ಆಗುತ್ತಿಲ್ಲ. ಒಟ್ಟಾರೆ ರಾಜ್ಯ ಸರಕಾರ ಪಾಪರ್ ಆಗಿದ್ದು, ಇಂತಹ ಸಂದರ್ಭದಲ್ಲಿ ಜನರ ತೆರಿಗೆ ಹಣದಲ್ಲಿ ಸಮಾವೇಶ ಮಾಡಲು ಹೊರಟಿರುವುದು ಸರಕಾರದ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಮುಖಂಡರಾದ ಈಶ್ವರಳ್ಳಿ ಮಹೇಶ್, ಕಲ್ಮುರುಡಪ್ಪ, ಹಿರೇಮಗಳೂರು ಪುಟ್ಟಸ್ವಾಮಿ, ದಿನೇಶ್, ಸಚಿನ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದವರು ಈ ಹಿಂದೆ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಆರೋಪಗಳು ನಿರಾಧಾರ, ನಾನು ಭ್ರಷ್ಟಾಚಾರ ಮಾಡಿದ್ದರೆ ತನಿಖೆಗೆ ಸಿದ್ಶ, ತನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ತನಿಖೆಗೊಳಪಡಿಸುವುದಾಗಿ ಕಾಂಗ್ರೆಸ್ ಮುಖಂಡರು ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಇದುವರೆಗೂ ತನಿಖೆ ಕೈಗೊಂಡಿಲ್ಲ. ಸುಳ್ಳು ಆರೋಪಗಳ ಬಗ್ಗೆ ತಾನು ಕೆಲವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಅವರು ಕೋರ್ಟ್ಗೆ ಅಲೆದಾಡುತ್ತಿದ್ದಾರೆ.
ಸಿ.ಟಿ. ರವಿ