ಚಿಕ್ಕಮಗಳೂರು | ಕ್ಷುಲ್ಲಕ ಕಾರಣಕ್ಕೆ ಉಪನ್ಯಾಸಕನ ಮೇಲೆ ರಾಡ್ನಿಂದ ಮಾರಣಾಂತಿಕ ಹಲ್ಲೆ; ಆರೋಪ
ವಿದ್ಯಾರ್ಥಿ ವಶಕ್ಕೆ

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಉಪನ್ಯಾಸಕನ ಮೇಲೆ ರಾಡ್ನಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶೃಂಗೇರಿ ಪಟ್ಟಣದಲ್ಲಿರುವ ಖಾಸಗಿ ಕಾಲೇಜ್ವೊಂದರಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ಎಂಬವರ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿ ಭಗವಾನ್ ಎಂಬಾತ ರಾಡ್ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಕಾಶ್ ಅವರು ಉತ್ತಮವಾಗಿ ಪಾಠ ಮಾಡುವ ಉಪನ್ಯಾಸಕ ಎಂದು ಹೆಸರು ಮಾಡಿದ್ದರು. ಆದರೆ, ಪಾಠ ಕೇಳದ, ತುಂಟಾಟ ಮಾಡುವ ವಿದ್ಯಾರ್ಥಿಗಳಿಗೆ ಗದರಿಸುತ್ತಿದ್ದರು ಎನ್ನಲಾಗುತ್ತಿದೆ. ವಿದ್ಯಾರ್ಥಿ ಭಗವಾನ್ ಕೂಡ ಈ ಉಪನ್ಯಾಸಕರಿಂದ ಹಲವಾರು ಬಾರಿ ಬೈಸಿಕೊಂಡಿದ್ದ. ಈ ಕಾರಣಕ್ಕೆ ಉಪನ್ಯಾಸಕ ಪ್ರಕಾಶ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಭಗವಾನ್, ಕೆಲ ದಿನಗಳ ಹಿಂದೆ ಉಪನ್ಯಾಸಕ ಪ್ರಕಾಶ್ ಮನೆಗೆ ಕೊರಿಯರ್ ಬಾಯ್ನಂತೆ ಹೆಲ್ಮೆಟ್ ಧರಿಸಿ ಬಂದು ಪ್ರಕಾಶ್ ಮೇಲೆ ಕಬ್ಬಿಣದ ರಾಡ್ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಪ್ರಕಾಶ್ ಅವರ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಮನೆ ಮಂದಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಕಾಶ್ ತಲೆಗೆ 6 ಹೊಲಿಗೆ ಹಾಕಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.
ಭಗವಾನ್ ಸಂಘಪರಿವಾರ, ಬಿಜೆಪಿ ಪಕ್ಷದದಲ್ಲಿ ಗುರುತಿಸಿಕೊಂಡಿದ್ದು, ಖಾಂಡ್ಯ ಹೋಬಳಿ ಬಿಜೆಪಿ ಉಸ್ತುವಾರಿ, ಆರೆಸ್ಸೆಸ್ ಹಿನ್ನೆಲೆಯಿರುವ ಸುಧಾಕರ್ ಎಂಬವರ ಪುತ್ರ ಎಂದು ತಿಳಿದು ಬಂದಿದೆ.
ಉಪನ್ಯಾಸಕ ಪ್ರಕಾಶ್ ಅವರು ಆಗಾಗ ವಿದ್ಯಾರ್ಥಿ ಭಗವಾನ್ಗೆ ಗದರಿಸಿದ್ದರು. ಇದರಿಂದ ಕೋಪಗೊಂಡಿದ್ದ ಆತ ಕೊರಿಯರ್ ಕೊಡುವ ನೆಪದಲ್ಲಿ ಹೋಗಿ ರಾಡ್ನಿಂದ ಹಲ್ಲೆ ಮಾಡಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದು, ಶೀಘ್ರವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಶೃಂಗೇರಿ ಠಾಣಾಧಿಕಾರಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.