ಕೊಳ್ಳೇಗಾಲ | ಕುಟುಂಬಕ್ಕೆ ಸ್ವಜಾತಿಯವರಿಂದಲೇ ಸಾಮಾಜಿಕ ಬಹಿಷ್ಕಾರ: ಆರೋಪ

ಸಾಂದರ್ಭಿಕ ಚಿತ್ರ
ಕೊಳ್ಳೇಗಾಲ : ತಾಲೂಕಿನ ಧನಿಗೇರಿ ಗ್ರಾಮದಲ್ಲಿ ಲಿಂಗಾಯತ ಸಮುದಾಯದ ಮುಖಂಡರು 20 ವರ್ಷಗಳಿಂದ ಸ್ವಜಾತಿಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ವಿಧಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಧನಿಗೇರಿ ಗ್ರಾಮದ ಲಿಂಗಾಯತ ಸಮುದಾಯದ ಲೇ.ಬಸಪ್ಪ ಅವರ ಪುತ್ರ ಬಿ.ಮಹದೇವಪ್ಪ ಅವರ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಒಳಗೊಂಡಿದ್ದು, ಬಿ.ಮಹದೇವಪ್ಪ ಅವರ ಪುತ್ರಿ ರಶ್ಮಿ 20 ವರ್ಷದ ಹಿಂದೆ ಇದೇ ಗ್ರಾಮದ ಪರಿಶಿಷ್ಟ ಪಂಗಡ ಸಮುದಾಯದ ಪುಟ್ಟಸ್ವಾಮಿ ಎಂಬಾತನ ಜೊತೆ ಪ್ರೇಮವಿವಾಹವಾಗಿರುವುದಕ್ಕೆ ಗ್ರಾಮದ ಲಿಂಗಾಯತ ಸಮುದಾಯದ ಬಸರಾಜಪ್ಪ, ಯೋಗೇಶ್, ಸತೀಶ, ಜಗದೀಶ್ ಎಂಬವರು ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ, ಗ್ರಾಮಾಂತರ ಠಾಣಾ ಪೊಲೀಸರಿಗೆ ಬಿ.ಮಹದೇವಪ್ಪ ದೂರು ನೀಡಿದ್ದಾರೆ.
ನಮ್ಮ ಕುಟುಂಬ ಈ ಸಾಮಾಜಿಕ ಬಹಿಷ್ಕಾರವನ್ನು 20ವರ್ಷಗಳಿಂದ ಸಹಿಸಿಕೊಂಡು ಬಂದಿದೆ. ಇಂತಹ ಅನಿಷ್ಟ ಪದ್ಧತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿ.ಮಹದೇವಪ್ಪ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪಿಎಸ್ಸೈ ಎಸ್.ಎ.ಸುಪ್ರೀತ್ ತನಿಖೆ ಕೈಗೊಂಡಿದ್ದಾರೆ.