ಚಾಮರಾಜನಗರ | ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಕಾರು

ಚಾಮರಾಜನಗರ : ಶಾರ್ಟ್ ಸರ್ಕ್ಯೂಟ್ ನಿಂದ ಕಾರೊಂದು ಸುಟ್ಟು ಕರಕಲಾದ ಘಟನೆ ಚಾಮರಾಜನಗರ ಹನೂರು ತಾಲೂಕಿನ ಎಲ್ಲೆಮಾಳ ಸಮೀಪದ ಪವಾಡ ಪುರುಷ ಮಹದೇಶ್ವರ ಬೆಟ್ಟ ಹೆದ್ದಾರಿಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಎಲ್ಲೆಮಾಳದ ಸಮೀಪದ ಮಹದೇಶ್ವರ ಬೆಟ್ಟದಿಂದ ಶ್ರೀಧರ್ ಕೆ. ಎಂಬುವವರು ಹಿಂತಿರುಗುತ್ತಿದ್ದಾಗ, ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಸಂಪೂರ್ಣವಾಗಿ ಭಸ್ಮವಾಗಿದೆ.
ಘಟನೆಯ ಮಾಹಿತಿ ಪಡೆದ ಹನೂರು ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಮಹೇಶ್ , ಸಿಬ್ಬಂದಿಗಳಾದ ರವಿ, ಆನಂದ್, ಜಯಪ್ರಕಾಶ್, ಅಶೋಕ್ ಹಾಗೂ ಬಸವರಾಜು ಅವರೊಂದಿಗೆ ಸ್ಥಳಕ್ಕಾಗಮಿಸಿ ತಕ್ಷಣ ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಡಗಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.
ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.
Next Story