ಕಲ್ಯಾಣ ಕರ್ನಾಟಕದ ವಿಮೋಚನೆಯ ಇತಿಹಾಸ ಯುವ ಪೀಳಿಗೆ ಅರಿತುಕೊಳ್ಳಬೇಕು : ಸಚಿವ ಈಶ್ವರ್ ಖಂಡ್ರೆ

ಬೀದರ್: ಕಲ್ಯಾಣ ಕರ್ನಾಟಕವು ಎರಡು ಸಲ ಸ್ವಾತಂತ್ರ್ಯ ಪಡೆದಿದೆ. ಈ ವಿಮೋಚನೆಯ ಇತಿಹಾಸವನ್ನು ಇಂದಿನ ಯುವ ಪೀಳಿಗೆ ತಪ್ಪದೇ ಅರಿತುಕೊಳ್ಳಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
1947ರ ಆಗಸ್ಟ್ 15ರಂದು ಇಡೀ ಭಾರತ ಸ್ವಾತಂತ್ರ್ಯ ಪಡೆದರೂ, ಹೈದರಾಬಾದ್ ಕರ್ನಾಟಕ ಭಾಗ ನಿಜಾಮರ ಆಳ್ವಿಕೆ ಮತ್ತು ರಜಾಕಾರರ ದಬ್ಬಾಳಿಕೆಯಿಂದ ವಿಮುಕ್ತವಾಗಿರಲಿಲ್ಲ. ಕೊನೆಗೂ ಸೇನಾ ಕಾರ್ಯಾಚರಣೆ ಬಳಿಕ 1948ರ ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಭಾರತ ಒಕ್ಕೂಟ ಸೇರಿತು. ಈ ಪೈಪೋಟಿಯ ಇತಿಹಾಸವನ್ನು ಇಂದಿನ ಯುವಜನತೆ ಅರಿತುಕೊಳ್ಳಬೇಕು” ಎಂದು ಸಚಿವರು ನೆನಪಿಸಿದರು.
ಅವರು ಗೋರ್ಟಾ ಹತ್ಯಾಕಾಂಡವನ್ನು ಉಲ್ಲೇಖಿಸಿ, ಅದನ್ನು “ಎರಡನೇ ಜಲಿಯನ್ ವಾಲಾಬಾಗ್” ಎಂದು ಕರೆಯಲಾಗುವುದರ ಹಿಂದಿರುವ ಭೀಕರತೆಯನ್ನು ವಿವರಿಸಿದರು.
ಸಚಿವ ಖಂಡ್ರೆ ಅವರು ಸಂವಿಧಾನದ 371 ಜೆ ತಿದ್ದುಪಡಿ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಪ್ರಸ್ತಾಪಿಸಿದರು. ಗ್ರೂಪ್ A ಮತ್ತು B ಹುದ್ದೆಗಳಿಗೆ 75%, ಗ್ರೂಪ್ C ಹುದ್ದೆಗಳಿಗೆ ಶೇ.80 ಮತ್ತು ಗ್ರೂಪ್ D ಹುದ್ದೆಗಳಿಗೆ ಶೇ.85ರಷ್ಟು ಮೀಸಲಾತಿ ಕಲ್ಯಾಣ ಕರ್ನಾಟಕದ ಜನರಿಗೆ ಸಿಗುತ್ತಿದೆ. ಹಾಗೆಯೇ ಇತರ ಜಿಲ್ಲೆಗಳಲ್ಲಿ ಶೇ.8 ಮೀಸಲಾತಿ ಲಭ್ಯ. ಶಿಕ್ಷಣ ಕ್ಷೇತ್ರದಲ್ಲಿಯೂ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸುಗಳಲ್ಲಿ ಶೇ.70 ಸೀಟುಗಳು ಈ ಭಾಗದ ವಿದ್ಯಾರ್ಥಿಗಳಿಗೆ ಮೀಸಲಿರುತ್ತವೆ ಎಂದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ತೀರ್ಮಾನ ಕೈಗೊಂಡಿರುವುದನ್ನು ಸಚಿವರು ಸ್ವಾಗತಿಸಿದರು. ಈ ಭಾಗದ ಏಳು ಜಿಲ್ಲೆಗಳ ದೀರ್ಘಕಾಲದ ಬೇಡಿಕೆ ಈ ಮೂಲಕ ಈಡೇರಲಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಅಲ್ಲದೆ, ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಸುಮಾರು 1 ಲಕ್ಷ ಹೇಕ್ಟರ್ ಬೆಳೆ ಹಾನಿಗೊಳಗಾಗಿದೆ. ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಶೀಘ್ರದಲ್ಲೇ ರೈತರಿಗೆ ಪರಿಹಾರ ವಿತರಿಸಲಾಗುವುದು. ಈಗಾಗಲೇ ಮನೆ ಹಾನಿಗಳಿಗೆ ಪರಿಹಾರ ನೀಡಲಾಗಿದೆ. ರಸ್ತೆ ಮತ್ತು ಸೇತುವೆಗಳ ಮರುನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವರ್ಷ ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದ್ದು, ಅದರಲ್ಲಿ ಬೀದರ್ ಜಿಲ್ಲೆಗೆ ಮಾತ್ರ 500 ಕೋಟಿ ರೂ. ಹೆಚ್ಚುವರಿ ಅನುದಾನ ಸಿಗುತ್ತಿದೆ ಎಂದು ಹೇಳಿದರು.
ಬೆಳಿಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರ ಮೆರವಣಿಗೆಯು ಬಸವೇಶ್ವರ ವೃತ್ತದಿಂದ ನೆಹರು ಕ್ರೀಡಾಂಗಣದವರೆಗೆ ಸಾಗಿತು.
ಕಾರ್ಯಕ್ರಮದಲ್ಲಿ ಸಂಸದ ಸಾಗರ್ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಸಿಇಒ ಡಾ. ಗಿರೀಶ್ ಬದೋಲೆ, ಎಸ್ಪಿ ಪ್ರದೀಪ್ ಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಪ್ರೋಬೇಷನರಿ ಐಎಎಸ್ ಅಧಿಕಾರಿ ರಮ್ಯಾ, ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.