ಬೀದರ್ | ರೈಲ್ವೆ ಇಂಜಿನಿಯರ್ ಸಿ.ಪಿ.ಸಿಂಗ್ ರವಿ ಅವರನ್ನು ಅಮಾನತು ಮಾಡುವಂತೆ ಸಚಿವ ಸೋಮಣ್ಣಗೆ ಕರವೇ ಮನವಿ

ಬೀದರ್ : ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಬರುವ ಬೀದರ್ ರೈಲ್ವೆ ಇಂಜಿನಿಯರ್ ಸಿ.ಪಿ.ಸಿಂಗ್ ರವಿ ಅವರನ್ನು ಅಮಾನತು ಮಾಡುವಂತೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕರವೇ (ಪ್ರವೀಣಕುಮಾರ ಶೆಟ್ಟಿ ಬಣ) ಸಂಘಟನೆ ಮನವಿ ಸಲ್ಲಿಸಿದೆ.
ಸಚಿವ ವಿ. ಸೋಮಣ್ಣ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಬರುವ ಬೀದರ್ ರೈಲ್ವೆಯಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಪಿ.ಸಿಂಗ್ ರವಿ ಅವರು ಕರ್ನಾಟಕದ ವಿವಿಧ ವೃಂದದ ನೌಕರರಾದ ಟ್ರ್ಯಾಕ್ ಮ್ಯಾನ್, ಗೇಟ್ ಮ್ಯಾನ್, ಮೇಟ್ ಕೀಮ್ಯಾನ್, ವಾಚ್ ಮ್ಯಾನ್ ಮತ್ತು ಟ್ರಾಲಿ ಮ್ಯಾನ್ಗಳನ್ನು ಏಕ ವಚನದಲ್ಲಿ ನಿಂದಿಸಿ ಅಗೌರವ ತೋರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕನ್ನಡಿಗ ನೌಕರರೆಂದರೆ ಇವರಿಗೆ ಅಸಹ್ಯವಾಗಿದೆ. ಕನ್ನಡಿಗರು ಶಿಸ್ತು, ಗೌರವ ಮತ್ತು ಸಭ್ಯತೆ ಕಾಪಾಡಿಕೊಳ್ಳುತ್ತಾ ಬಂದಿರುತ್ತಾರೆ. ಇಂತಹ ಘಟನೆಗಳಿಂದ ಕನ್ನಡಿಗ ನೌಕರರ ಘನತೆ ಹಾಗೂ ನೈತಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಇವರಿಗೆ ಅವಮಾನ ಮಾಡಿರುವುದನ್ನು ಪರಿಶೀಲಿಸಿ, ಎಲ್ಲಾ ಕನ್ನಡಿಗ ನೌಕರರಿಗೆ ಗೌರವಯುತ ಮತ್ತು ಸುರಕ್ಷಿತ ಕೆಲಸದ ವಾತಾವರಣ ನಿರ್ಮಾಣ ಮಾಡಬೇಕು. ಅದೇ ರೀತಿ ಕನ್ನಡಿಗ ನೌಕರರಿಗೆ ಅವಮಾನ ಮಾಡುತ್ತಿರುವ ಈ ಅಧಿಕಾರಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಸಿ.ಪಿ.ಸಿಂಗ್ ರವಿ ಅವರು ಉದ್ದೇಶಪೂರ್ವಕವಾಗಿ ಕನ್ನಡಿಗ ನೌಕರರೊಂದಿಗೆ ಕೀಳಾಗಿ ನಡೆದುಕೊಳ್ಳುತ್ತಿದ್ದಾರೆ. ಕೂಡಲೇ ಇವರನ್ನು ಸೇವೆಯಿಂದ ಅಮಾನತುಗೊಳಿಸಬೇಕು.15 ದಿನದ ಒಳಗಡೆ ಇವರನ್ನು ಅಮಾನತು ಮಾಡದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮರ್ಜಾಪೂರ್, ಪ್ರಲ್ಹಾದ್ ಚಿಟ್ಟಾ ವಾಡಿ, ಡಾ.ಉದಯಸಿಂಗ್, ಅಲೆಕ್ಸಾಂಡರ್ ಕಮಠಾಣ, ಅಶೋಕ್ ನೇಮತಾಬಾದ್, ನಿಲೇಶ್ ರಾಠೋಡ್, ಧನರಾಜ್ ಚಿಟ್ಟಾ ವಾಡಿ, ರಾಜಗೊಂಡ್ ಚಿಟ್ಟಾವಾಡಿ ಹಾಗೂ ಶಿವಕುಮಾರ್ ಮಾಮೂಡಗಿ ಸೇರಿದಂತೆ ಹಲವು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.