ಬೀದರ್ | ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರನ್ನು ಅಮಾನತುಗೊಳಿಸುವಂತೆ ಜೆಡಿಎಸ್ ಜಿಲ್ಲಾ ವಿದ್ಯಾರ್ಥಿ ಘಟಕದ ವತಿಯಿಂದ ಧರಣಿ

ಬೀದರ್ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ ಎಂ.ಎಸ್ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಜಿಲ್ಲಾ ವಿದ್ಯಾರ್ಥಿ ಘಟಕದ ವತಿಯಿಂದ ಧರಣಿ ನಡೆಯಿತು.
ಧರಣಿ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಪತ್ರದಲ್ಲಿ, ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆಯ ಉಪನಿರ್ದೇಶಕರಾಗಿ ಶ್ರೀಧರ್ ಎಂ.ಎಸ್ ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಈ ಇಲಾಖೆಯು ಯಾರ ಹಿಡಿತದಲ್ಲಿಯೂ ಇಲ್ಲದಂತಾಗಿದೆ ಎಂದು ಉಲ್ಲೇಖಿಲಾಗಿದೆ.
2024ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆಯಲ್ಲಿ ಮಿಷನ್ ಶಕ್ತಿ ಹಾಗೂ ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯಲ್ಲಿ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳ ನೇಮಕಾತಿಯಲ್ಲಿ ಸರಕಾರದ ನಿಯಮಗಳು ಗಾಳಿಗೆ ತೂರಿ ರಾಜಾರೋಷವಾಗಿ ಮನಬಂದಂತೆ ಅನರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿ, ಅರ್ಹ ಅಭ್ಯರ್ಥಿಗಳನ್ನು ಕೈಬಿಟ್ಟಿರುತ್ತಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಈ ಅವ್ಯವಹಾರದ ಬಗ್ಗೆ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಹಲವು ಬಾರಿ ದೂರು ನೀಡಲಾಗಿದೆ. ಅವರು ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಇದರಿಂದಾಗಿ ಈ ಭ್ರಷ್ಟಾಚಾರದಲ್ಲಿ ಡಿಸಿ ಶಿಲ್ಪಾ ಶರ್ಮಾ ಅವರ ಕುಮ್ಮಕ್ಕು ಇದ್ದಂತೆ ಕಂಡುಬರುತ್ತದೆ ಎಂದು ಆರೋಪಿಸಿದರು. ನೇಮಕಾತಿಯಲ್ಲಿ ನಡೆದಿರುವ ಹಗರಣ, ಭ್ರಷ್ಟಚಾರದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕೂಡ ವರದಿ ಸಲ್ಲಿಸಲಾಗಿದೆ. ಇದನ್ನು ನೋಡಿ ಅವರು ಉಪನಿರ್ದೇಶಕ ಶ್ರೀಧರ ಅವರನ್ನು ಅಮಾನತ್ತು ಮಾಡುವ ಭರವಸೆ ನೀಡಿದ್ದರು. ಆದರೂ ಕೂಡ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ 15 ದಿನದ ಒಳಗೆ ಶ್ರೀಧರ್ ಅವರನ್ನು ಅಮಾನತ್ತು ಮಾಡಬೇಕು. ಈ ನೇಮಕಾತಿಯ ಹಗರಣಕ್ಕೆ ಕುಮ್ಮಕ್ಕು ನೀಡಿರುವ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನು ವರ್ಗಾವಣೆ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಆದೇಶ ರದ್ದುಪಡಿಸಬೇಕು. ಮತ್ತೊಮ್ಮೆ ಅರ್ಜಿ ಆಹ್ವಾನಿಸಬೇಕು. ಕಂಪ್ಯೂಟರ್ ಪರೀಕ್ಷೆ, ಮೌಖಿಕ ಸಂದರ್ಶನ, ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಪಾರದರ್ಶಕತೆಯಿಂದ ನಡೆಸಬೇಕು. ಸರಕಾರ ನಿಗದಿ ಪಡಿಸಿದ ನಿಯಮಾನುಸಾರವಾಗಿ ಕಾನೂನಾತ್ಮಕವಾಗಿ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜೆಡಿಎಸ್ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಅಭಿ ಕಾಳೆ, ಜನತಾ ದಳದ ಎಸ್ಸಿ ಘಟಕದ ಅಧ್ಯಕ್ಷ ದೇವೇಂದ್ರ ಸೋನಿ, ಮುಹಮ್ಮದ್ ಸಲೀಮ್, ರಾಜಕುಮಾರ್ ಭಟಾರೆ, ಲಾಲಪ್ಪ ನಿರ್ಣಾ, ಬೋಮಗೊಂಡ ಚಿಟ್ಟಾ, ಶಿವರಾಜ್, ರಾಜಕುಮಾರ್ ಕಮಠಾಣಾ ಹಾಗೂ ಮಲ್ಲಿಕಾರ್ಜುನ್ ನೇಳಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.