ಬೀದರ್ | ಸರಕು ಶೆಡ್ ನಿರ್ಮಾಣದಿಂದ ಸರಕು ಲೋಡಿಂಗ್ಗೆ ಮತ್ತಷ್ಟು ಉತ್ತೇಜನ ನೀಡಲಿದೆ : ಸಚಿವ ವಿ.ಸೋಮಣ್ಣ

ಬೀದರ್ : 15 ಕೋಟಿ ರೂ. ವೆಚ್ಚದಲ್ಲಿ ಸರಕು ಶೆಡ್ ನಿರ್ಮಾಣವಾಗುತ್ತಿದ್ದು, ಈ ನಿಲ್ದಾಣವು ಹೊಸ ಸರಕು ಶೆಡ್ಗೆ ಸೂಕ್ತವಾಗಿದೆ. ಈ ಪ್ರದೇಶದಲ್ಲಿ ಸರಕು ಲೋಡಿಂಗ್ಗೆ ಇದು ಮತ್ತಷ್ಟು ಉತ್ತೇಜನ ನೀಡಲಿದೆ. ಮುಂದಿನ 50 ವರ್ಷಗಳ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಸರಕು ಶೆಡ್ನ್ನು ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಖಾನಾಪುರ್ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಸರಕು ಶೆಡ್ ನಿರ್ಮಾಣ ಮತ್ತು ಭಾಲ್ಕಿ ಮತ್ತು ಕಾಳಗಾಪುರ್ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 71ರ ಬದಲಿಗೆ ರಸ್ತೆ ಕೆಳಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರಸ್ತೆ ಸಾರಿಗೆಗೆ ಹೋಲಿಸಿದರೆ ರೈಲ್ವೆ ಮೂಲಕ ಸಾರಿಗೆ ವೆಚ್ಚ ಕಡಿಮೆಯಾಗಿದ್ದು, ಸಣ್ಣ ಕೈಗಾರಿಕೆಗಳಿಗೆ ತಮ್ಮ ಉತ್ಪನ್ನಗಳನ್ನು ವಿವಿಧ ಸ್ಥಳಗಳಿಗೆ ಸಾಗಿಸಲು ಸಹಾಯಕವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನ ಮತ್ತು ದೂರದೃಷ್ಟಿಯ ನಾಯಕತ್ವದಲ್ಲಿ ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಪ್ರಗತಿಯಲ್ಲಿವೆ ಎಂದರು.
ಭಾಲ್ಕಿಯಲ್ಲಿ ಲೆವೆಲ್ ಕ್ರಾಸಿಂಗ್ ಸಂಖ್ಯೆ 71ರ ಬದಲಿಗೆ 10.85 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕೆಳಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಈ ಕೆಳಸೇತುವೆ ಕಾಮಗಾರಿ ಪೂರ್ಣಗೊಂಡ ನಂತರ ವಾಹನ ಸಂಚಾರಕ್ಕೆ ಸುಗಮ ಮತ್ತು ಸುರಕ್ಷತೆ ಹೆಚ್ಚಲಿದೆ. ಬೀದರ್ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಯನ್ನು 24.35 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ತಿಳಿಸಿದರು.
ಯಾದಗಿರಿ ರೈಲ್ವೆ ನಿಲ್ದಾಣವನ್ನು 26.12 ಕೋಟಿ ರೂ. ವೆಚ್ಚದಲ್ಲಿ ಹಾಗೂ ರಾಯಚೂರು ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಯನ್ನು 21.71 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇವುಗಳ ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ಒಟ್ಟು 58 ರೈಲ್ವೆ ನಿಲ್ದಾಣಗಳನ್ನು ಪುನರಾಭಿವೃದ್ಧಿಪಡಿಸಲಾಗುತ್ತಿದೆ. ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ 1,465 ರೈಲ್ವೆ ಕಿಲೋ ಮೀಟರ್ಗಳಲ್ಲಿ ಕವಚ ರೈಲು ಸಂರಕ್ಷಣಾ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಮುಂದಿನ ಹಂತದಲ್ಲಿ ಇದರ ವಿಸ್ತರಣೆಯನ್ನು ಕೈಗೊಳ್ಳಲಾಗುತ್ತಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ ರಾಜ್ಯಕ್ಕೆ 7,654 ಕೋಟಿ ರೂ. ರೈಲ್ವೆ ಬಜೆಟ್ ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
ಸಂಸದ ಸಾಗರ್ ಖಂಡ್ರೆ ಅವರು ಮಾತನಾಡಿ, ಹೊಸ ಸರಕು ಶೆಡ್ ಗ್ರಾಹಕರಿಗೆ ಸೂಕ್ತವಾಗಿದ್ದು, ಇದು ಈ ಪ್ರದೇಶದಲ್ಲಿ ಸರಕು ಲೋಡಿಂಗ್ಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಈ ಎರಡೂ ಯೋಜನೆಗಳು ಈ ಪ್ರದೇಶದ ರೈಲ್ವೆ ಮೂಲ ಸೌಕರ್ಯದ ಬೆಳವಣಿಗೆಗೆ ಕೊಡುಗೆ ನೀಡಲಿವೆ ಎಂದರು.
ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ರಾಜ್ಯದಲ್ಲಿ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಸೇರಿದಂತೆ ಹಲವಾರು ರೈಲ್ವೆ ಅಭಿವೃದ್ಧಿ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಭಾಲ್ಕಿ ಮತ್ತು ಹುಮನಾಬಾದ್ ನಿಲ್ದಾಣಗಳ ಪುನರಾಭಿವೃದ್ಧಿಗೆ ಸಹ ಒಪ್ಪಿಗೆ ನೀಡಬೇಕು. ಬೀದರ್ನಿಂದ ದಿಲ್ಲಿಗೆ, ಬೀದರ್ ನಿಂದ ಪಂಡರಪುರ್ ಗೆ ಹೊಸ ರೈಲಿನ ವ್ಯವಸ್ಥೆ ಮಾಡಬೇಕು. ಹಾಗೆಯೇ ಬಸವಕಲ್ಯಾಣ ನಗರ ಐತಿಹಾಸಿಕ ಅನುಭವ ಮಂಟಪ ಹೊಂದಿದ್ದು, ಆ ನಗರಕ್ಕೆ ರೈಲಿನ ವ್ಯವಸ್ಥೆ ಮಾಡಬೇಕು. ಅದೇ ರೀತಿ ಬೀದರ್, ಹುಮನಾಬಾದ್ ಹಾಗೂ ಕಲಬುರಗಿ ನಡುವಿನ ರೈಲ್ವೆ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು ಎಂದು ರಾಜ್ಯ ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ಧಲಿಂಗಪ್ಪ ಪಾಟೀಲ್, ಪ್ರಭು ಚೌವ್ಹಾಣ್, ಶರಣು ಸಲಗರ್, ವಿಧಾನ ಪರಿಷತ್ ಸದಸ್ಯ ಡಾ. ಎಂ.ಜಿ. ಮೂಳೆ, ದಕ್ಷಿಣ ಮಧ್ಯ ರೈಲ್ವೆಯ ಹೆಚ್ಚುವರಿ ಮಹಾಪ್ರಬಂಧಕ ನೀರಜ್ ಅಗರವಾಲ್ ಹಾಗೂ ಸಿಕಂದರಾಬಾದ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಭಾರತೇಶ್ ಕುಮಾರ್ ಜೈನ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.