ಹಬ್ಬಗಳನ್ನು ಬೇರೆಯವರ ಆಚಾರ ವಿಚಾರಕ್ಕೆ ಧಕ್ಕೆ ಬರದಂತೆ ಆಚರಿಸಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಯಾವುದೇ ಜಾತಿ, ಧರ್ಮದಲ್ಲಿ ಬರುವ ಹಬ್ಬಗಳನ್ನು ಬೇರೆಯವರ ಆಚಾರ, ವಿಚಾರಕ್ಕೆ ಧಕ್ಕೆ ಬರದಂತೆ ಶಾಂತಿಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಹಬ್ಬದ ಆಚರಣೆ ನಿಮಿತ್ಯ ಅನಧಿಕೃತ ಜಾನುವಾರುಗಳ ವಧೆ ಹಾಗೂ ಜಾನುವಾರುಗಳ ಸಾಗಾಣಿಕೆ ತಡೆಗಟ್ಟುವ ಕುರಿತು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂ.7 ರಂದು ಆಚರಿಸಲ್ಪಡುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರು ಮತ್ತು ಒಂಟೆಗಳ ವಧೆ, ಸಾಗಾಣಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಔರಾದ್ ತಾಲ್ಲೂಕಿನ ವನಮಾರಪಳ್ಳಿ ಮತ್ತು ಕಮಲನಗರ್, ತಾಲ್ಲೂಕಿನ ಹುಲಸೂರ ಹಾಗೂ ಬೀದರ್ ತಾಲ್ಲೂಕಿನ ಶಹಾಪೂರ್ ಗೋಟ್ ನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ, ಅಧಿಕಾರಿಗಳನ್ನು ನಿಯೋಜಿಸಬೇಕು. ಜೂ.1 ರಿಂದ 7 ರವರೆಗೆ ಜಾನುವಾರು, ಒಂಟೆಗಳ ಸಾಗಾಣಿಕೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಪೋಲೀಸ್ ಇಲಾಖೆ ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬಕ್ರೀದ್ ಹಬ್ಬದ ದಿನದಂದು ಉಂಟಾಗುವ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ನಗರದ ಸ್ವಚ್ಛತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲು ನಗರಸಭೆ ಆಯುಕ್ತರಿಗೆ ಸೂಚಿಸಿದರು. ಪಿಂಜರಾಪೋಲ್ ಯೋಜನೆ ಅಡಿ ಗೋಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಜಾನುವಾರು ಸಾಗಾಣಿಕೆ ಮಾಡುವಾಗ, ವಾಹನದ ಜೊತೆಗೆ ಜಾನುವಾರುಗಳ ಮಾಲಕರ ವಿಳಾಸ, ಎಲ್ಲಿಗೆ ಸಾಗಾಣಿಕೆ ಮಾಡಲಾಗುವುದು ಎಂಬುದರ ವಿವರ ಪಶು ವೈದ್ಯರಿಂದ ಪಡೆದ ದೃಢೀಕರಣ ಪ್ರಮಾಣ ಪತ್ರ ಹೊಂದಿರಬೇಕು. ಹಾಗೆಯೇ ವಾಹನದಲ್ಲಿ 100 ಕೆ.ಜಿ. ಕೆಳಗಿನ ಜಾನುವಾರುಗಳಿಗೆ 1x1.5 ಚ.ಮೀ. ಮತ್ತು 100 ಕೆ.ಜಿ. ಮೇಲಿನ ಜಾನುವಾರುಗಳಿಗೆ 1x2 ಚ.ಮೀ. ಸ್ಥಳಾವಕಾಶ ಒದಗಿಸಿ ಕೊಡಬೇಕು. ಇಲ್ಲವಾದರೆ prevention of Cruelty to animals Act ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ನರಸಪ್ಪ ಎ.ಡಿ., ಪಿಎಸ್ಐ ತಸ್ಲೀಮಾ ಹಾಗೂ ಆರ್.ಟಿ.ಒ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪಶು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.