ಬೀದರ್ | ಸರ್ಕಾರದ ಹಣ ಅವ್ಯವಹಾರ ಆರೋಪ : ಸಹಾಯಕ ಕೃಷಿ ನಿರ್ದೇಶಕರನ್ನು ಅಮಾನತು ಮಾಡಲು ಒತ್ತಾಯ

ಬೀದರ್ : ಔರಾದ್ (ಬಾ) ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಧೂಪತ್ ಮಹಾಗಾಂವ್ ಮತ್ತು ಲಾಧಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಿವಾರ್ಡ್ ಕಾಮಗಾರಿಗಳು ಕಳಪೆ ಮಟ್ಟದಿಂದ ನಿರ್ಮಿಸಿ, ನಕಲಿ ಬಿಲ್ ಸೃಷ್ಠಿ ಮಾಡುವ ಮೂಲಕ ಸರ್ಕಾರದ ಹಣ ಕೊಳ್ಳೆ ಹೊಡೆದಿದ್ದಾರೆ. ಇದರಿಂದಾಗಿ ಅವರನ್ನು ಅಮಾನತು ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯು ಆರೋಪಿಸಿದೆ.
ಇಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಧೂಪತ್ ಮಾಹಾಗಾಂವ್ ಗ್ರಾಮದ ಪ್ರಕಾಶ್ ಮತ್ತು ಶಂಕರ್ ಅವರ ಜಮೀನಿನಲ್ಲಿ ಬದು ನಿರ್ಮಾಣ ಮಾಡದೆ, ನಕಲಿ ಬಿಲ್ ಸೃಷ್ಠಿ ಮಾಡಿ, ಬಿಲ್ಲು ಪಡೆದುಕೊಂಡಿದ್ದಾರೆ. ಹಾಗೆಯೇ ಚೆಕ್ ಡ್ಯಾಮ್, ಸಿ.ಡಿ ಕಾಮಗಾರಿ ಹಾಗೂ ಬೋಲ್ಡರ್ ಚೆಕ್ಸ್ ಕಾಮಗಾರಿ ಸಹ ಕಳಪೆ ಮಟ್ಟದಿಂದ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಕುಲಂಕುಷವಾಗಿ ಪರಿಶೀಲನೆ ಮಾಡಿ, ತಪ್ಪಿತಸ್ಥ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಇವಾಗ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ನಿಲ್ಲಿಸಿ, ಕಾಮಗಾರಿಗಳ ಬಿಲ್ಲು ತಡೆ ಹಿಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಈ ಮನವಿಗೆ ಸ್ಪಂದಿಸಿ ಒಂದು ವಾರದೋಳಗಾಗಿ ಸ್ಥಳಕ್ಕೆ ಭೇಟಿ ನೀಡಿ, ತಪ್ಪಿತಸ್ಥ ಅಧಿಕಾರಿಯ ಮೇಲೆ ಕಾನೂನಿನ ಮೂಲಕ ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ಅಮಾನತು ಮಾಡದೇ ಹೋದಲ್ಲಿ ತಮ್ಮ ಕಚೇರಿ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ್ ಕೆಂಪೆನೂರ್, ಉಪಾಧ್ಯಕ್ಷ ಸಂಗಮೇಶ್ ಏಣಕೂರ್, ಜಿಲ್ಲಾಧ್ಯಕ್ಷ ಜೇಮ್ಸ್ ಇಸ್ಲಾಂಪೂರ್, ಸಿದ್ಧಾರ್ಥ ಯೋಗಿ, ಯೇಸಪ್ಪಾಧಪಟ್ಟೆ, ಕಮಲಹಾಸನ್ ಭಾವಿದೊಡ್ಡೆ, ಪುಟ್ಟರಾಜ್ ಕಟ್ಟಿತುಗಾಂವ್, ಸೀಮನ್ ಕರ್ಕಾಳೆ ಹಾಗೂ ಅಂಬಾದಾಸ್ ಬೇಲೂರ್ ಸೇರಿದಂತೆ ಇತರರು ಇದ್ದರು.