ಕಮ್ಯುನಿಷ್ಟರು, ಅಂಬೇಡ್ಕರ್ ಒಗ್ಗೂಡಿದ್ದರೆ ಕ್ರಾಂತಿಯಾಗಿ ನಾವು ಸಮಾಜವಾದದಲ್ಲಿ ಬದುಕುತ್ತಿದ್ದೆವು : ರಾವ್ ಸಾಹೇಬ್ ಕಸಬೆ

ಬೀದರ್ : ಕಮ್ಯುನಿಷ್ಟರು ಹಾಗೂ ಅಂಬೇಡ್ಕರ್ ಇವರಿಬ್ಬರು ಒಗ್ಗೂಡಿದರೆ ಈ ದೇಶದಲ್ಲಿ ಯಾವಾಗಲೋ ಕ್ರಾಂತಿಯಾಗಿ ನಾವು ಈಗ ಸಮಾಜವಾದದಲ್ಲಿ ಬದುಕುತ್ತಿದ್ದೆವು ಎಂದು ಮಹಾರಾಷ್ಟ್ರದ ಹಿರಿಯ ಸಾಹಿತಿ, ಚಿಂತಕ ರಾವ್ ಸಾಹೇಬ್ ಕಸಬೆ ಅವರು ಅಭಿಪ್ರಾಯಪಟ್ಟರು.
ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಶಹೀದ್ ಭಗತಸಿಂಗ್ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಂ.ಎನ್ ಸುಂದರರಾಜ್ ಅವರ ಸ್ಮರಣಾರ್ಥವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹುಶಃ ಬಾಬಾಸಾಹೇಬರ ಮಾತುಗಳು ಕಮ್ಯುನಿಷ್ಟರಿಗೆ ತಿಳಿದಿಲ್ಲ ಅಥವಾ ಆ ಸಮಯದ ಕಮ್ಯುನಿಷ್ಟರು ಬಾಬಾಸಾಹೇಬರನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದರು ಅನಿಸುತ್ತದೆ. ಇವರಿಬ್ಬರು ಒಬ್ಬರಿಗೊಬ್ಬರು ತಿಳಿದುಕೊಂಡಿಲ್ಲ. ಈ ದೇಶದ ಬಡವರ ಚಳುವಳಿ ಮಾರ್ಕ್ಸ್ ವಾದಿಗಳು ನಡೆಸುತ್ತಿದ್ದರು. ಇನ್ನೊಂದು ಕಡೆ ದಲಿತರ ಚಳುವಳಿ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆಯುತ್ತಿತ್ತು. ಒಂದು ವೇಳೆ ಇವರಿಬ್ಬರು ಒಗ್ಗೂಡಿದರೆ ಈ ದೇಶದಲ್ಲಿ ಕ್ರಾಂತಿಯಾಗುತ್ತಿತ್ತು. ಇವತ್ತು ನಾವು ಸಮಾಜವಾದದ ವ್ಯವಸ್ಥೆಯಲ್ಲಿ ಬದುಕಿರುತ್ತಿದ್ದೇವು. ಆದರೆ ಈ ತರಹ ಆಗಲಿಲ್ಲ ಎಂದು ತಿಳಿಸಿದರು.
ಇಂದು ದೇಶದಲ್ಲಿ ಫ್ಯಾಸಿಸಂ ಜಾರಿಯಲ್ಲಿದೆ. ಇಂದಿನ ದಿನಗಳಲ್ಲಿ ಅಸ್ಪೃಶ್ಯರ ಮುಖದ ಮೇಲೆ ಮೂತ್ರ ಮಾಡಲಾಗುತ್ತಿದೆ. ಸ್ತ್ರೀಯರನ್ನು ಬೆತ್ತಲೆ ಮಾಡಿ ರಸ್ತೆ ಮೇಲೆ ತಿರುಗಾಡಿಸಲಾಗುತ್ತಿದೆ. ಮಕ್ಕಳ ಮೇಲೆ ದೌರ್ಜನ್ಯ, ಮುಸ್ಲಿಂರಿಗೆ ತೊಂದರೆ, ಜಾತೀಯ ಘೋಷಣೆ ಹಾಗೂ ಬಲತ್ಕಾರದಂತಹ ಘಟನೆಗಳು ದಿನನಿತ್ಯ ಸಾಗುತ್ತಿವೆ. ಇದಕ್ಕೆಲ್ಲ ಕಾರಣವೇನೆಂದರೆ ಬಂಡವಾಳಶಾಹಿಯನ್ನು ಪೋಷಣೆ ಮಾಡುವುದಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ಉಳಿಸಬೇಕು ಎಂದರೆ ನಾವು ಇಂದು ಸುಂದರರಾಜ್ ಅವರ ವಿಚಾರಗಳ ಕಡೆಗೆ ಸಾಗಬೇಕಿದೆಯೋ ಅಥವಾ ಮೋದಿಯವರ ವಿಚಾರಗಳ ಕಡೆಗೆ ಸಾಗಬೇಕಿದೆಯೋ ಎನ್ನುವುದು ನಮ್ಮನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕಿದೆ. ಸಮಾಜವಾದ ಈ ದೇಶದಲ್ಲಿ ಅಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಬರಬೇಕು. ಅದು ತುಂಬಾ ಅವಶ್ಯಕವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಪ್ರೊ.ಆರ್. ಕೆ.ಹುಡಗಿ, ಶಹೀದ್ ಭಗತ್ಸಿಂಗ್ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮಾರುತಿ ಗೋಖಲೆ, ಸದಸ್ಯರಾದ ನೂರಂದಯ್ಯ ಸ್ವಾಮಿ, ಬಾಬುರಾವ್ ಹೊನ್ನಾ, ನೀಲಂಜನ, ಸಾಮಾಜಿಕ ಹೋರಾಟಗಾರ ಗಂಗಾರಾಮ್ ನಡುವಿನದೊಡ್ಡಿ ಹಾಗೂ ಸುಂದರರಾಜ್ ಅವರ ಪತ್ನಿ ವಿಕ್ಟೋರಿಯಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.