ಧರ್ಮಸ್ಥಳ ಪ್ರಕರಣ: ಎಸ್ಐಟಿಗೆ ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಲು ಅಧಿಕಾರ ನೀಡಬೇಕೆಂದು ಒತ್ತಾಯ

ಬೆಂಗಳೂರು: ಧರ್ಮಸ್ಥಳ ಸಮೀಪದ ಗ್ರಾಮಗಳಲ್ಲಿ ವರದಿಯಾಗಿರುವ ನೂರಾರು ಮಹಿಳೆಯರ ಅತ್ಯಾಚಾರ, ಕೊಲೆ ಪ್ರಕರಣಗಳನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆಯಾಗಿದ್ದು, ಯಾವ ಒತ್ತಡಗಳಿಲ್ಲದೆ, ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಲು ಅಗತ್ಯ ಅಧಿಕಾರವನ್ನು ಎಸ್ಐಟಿಗೆ ನೀಡಬೇಕು ಎಂದು ‘ಕೊಂದವರು ಯಾರು’ ಆಂದೋಲನವು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಮಂಗಳವಾರ ಇಲ್ಲಿನ ಗಾಂಧಿ ಭವನದಲ್ಲಿ ‘ಕೊಂದವರು ಯಾರು’ ಆಂದೋಲನವು ಆಯೋಜಿಸಿದ್ದ ‘ನೊಂದವರೊಂದಿಗೆ ನಾವು-ನೀವು’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಪ್ರಗತಿಪರ ಸಾಹಿತಿಗಳು, ಮಹಿಳಾ ಹೋರಾಟಗಾರರು ಭಾಗವಹಿಸಿ, ‘ಧರ್ಮಸ್ಥಳ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ತನಿಖೆಯನ್ನು ಸರಿಯಾಗಿ ನಡೆಸದೆ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳು, ವೈದ್ಯರು, ತನಿಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನೂ ಅಪರಾಧಿಗಳೆಂದು ಪರಿಗಣಿಸಿ ಕಾನೂನು ಪ್ರಕಾರ ಶಿಕ್ಷೆಗೆ ವಿಧಿಸಬೇಕು’ ಎಂದು ಆಗ್ರಹಿಸಿದರು.
ಮಾನಸ ಬಳಗದ ಮುಖ್ಯಸ್ಥೆ ಚಂಪಾವತಿ ಮಾತನಾಡಿ, ಮಹಿಳಾ ಚಳುವಳಿಯು ಸದಾಕಾಲ ನೊಂದವರ ಜೊತೆ ನಿಂತಿದೆ. ಆದ್ದರಿಂದಲೇ ಧರ್ಮಸ್ಥಳದ ನೊಂದ ಕುಟುಂಬಗಳನ್ನು ಭೇಟಿ ಮಾಡುವುದು ನಮಗೆ ಅತ್ಯಗತ್ಯವಾಗಿತ್ತು ಎಂದರು.
ಮಹಿಳಾ ಮುನ್ನಡೆಯ ಮಲ್ಲಿಗೆ ಮಾತನಾಡಿ, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹೆಣ್ಣುಮಕ್ಕಳ ಅಪಹರಣ, ಅತ್ಯಾಚಾರ, ಕೊಲೆಗಳ ವಿರುದ್ದ ಹೋರಾಟ ಸುಧೀರ್ಘ ಕಾಲದಿಂದ ನಡೆದುಬಂದಿದೆ. ನಿರಂತರವಾಗಿ, ಸ್ಥಳೀಯರು ಈ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ. ಇವರೊಂದಿಗೆ ‘ಕೊಂದವರು ಯಾರು?’ ವೇದಿಕೆಯೂ ಜೊತೆ ನಿಂತಿದ್ದು, ನೊಂದವರಿಗೆ ನ್ಯಾಯ ದೊರೆಯುವ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಮುಂದುವರೆಯಲಿದೆ ಎಂದರು.
ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ ಮಾತನಾಡಿ, ಧರ್ಮಸ್ಥಳದಲ್ಲಿ ಹಲವಾರು ಹೆಣ್ಣುಮಕ್ಕಳ ಕೊಲೆಯಾಗಿದ್ದರೂ, ಇನ್ನೂ ತಪ್ಪಿಸ್ಥರಿಗೆ ಶಿಕ್ಷೆಕೊಡಿಸುವಲ್ಲಿ ವಿಳಂಬವಾಗುತ್ತಿದೆ. ಧರ್ಮಸ್ಥಳದಲ್ಲಿ ನಡೆದಿರುವ ಹಲವು ಪ್ರಕರಣಗಳಲ್ಲಿ ಸೂಕ್ತ ತನಿಖೆ ಮಾಡಬೇಕಿದ್ದ ಪೊಲೀಸರೇ ಖಾಸಗಿ ಸಂಸ್ಥೆಯ ವಾಹನದಲ್ಲಿ ಬಂದು ಜನರಿಗೆ ಬೆದರಿಕೆ ನೀಡಿದ ಪ್ರಸಂಗಳಿವೆ ಎಂದು ಆರೋಪಿಸಿದರು.
ಹೋರಾಟಗಾರ್ತಿ ಮಧು ಭೂಷಣ್ ಮಾತನಾಡಿ, ಧರ್ಮಸ್ಥಳ ಪ್ರಕರಣಗಳ ತನಿಖೆಗೆ ರಾಜ್ಯ ಸರಕಾರ ಎಸ್ಐಟಿ ರಚನೆ ಮಾಡಿರುವುದು ಸ್ವಾಗತಾರ್ಹ. ಆದರೆ, ಧರ್ಮಸ್ಥಳದ ಹೆಣ್ಣುಮಕ್ಕಳನ್ನು ಕೊಂದವರಾರು? ಎಂಬ ಮೂಲ ಪ್ರಶ್ನೆಯನ್ನೇ ಕಡೆಗಣಿಸಲಾಗಿದೆ ಎಂದು ಹೇಳಿದರು.
ವಕೀಲ ಮೋಹಿತ್ ಕುಮಾರ್ ಮಾತನಾಡಿ, ಸೌಜನ್ಯ, ವೇದವಲ್ಲಿ, ಪದ್ಮಲತಾ, ಯಮುನಾ- ನಾರಾಯಣ ಕೇಸ್ಗಳಲ್ಲಿ ತಪ್ಪಿತಸ್ಥರು ಏಕೆ ಪತ್ತೆಯಾಗಲಿಲ್ಲ? ಎಲ್ಲ ಕೇಸ್ನಲ್ಲೂ ಬೆಳ್ತಂಗಡಿ ಪೊಲೀಸರ ತನಿಖೆಯಲ್ಲಿ ಒಂದೇ ರೀತಿಯ ವಿಧಾನ ಕಾಣುತ್ತಿದೆ. ಯಾರೋ ಒಬ್ಬನನ್ನು ಆರೋಪಿ ಎಂದು ಕರೆತರುತ್ತಾರೆ ಎಂದು ಹೇಳಿದರು.
ವೇದವಲ್ಲಿ ಪ್ರಕರಣದಲ್ಲಿ ಆಕೆಯ ಗಂಡನನ್ನೇ ಆರೋಪಿಯನ್ನಾಗಿ ಮಾಡಿದ್ದರು. ಪದ್ಮಲತಾ ಪ್ರಕರಣದಲ್ಲಿ ಯಾರೂ ಪತ್ತೆಯಾಗಲಿಲ್ಲ. ನಾರಾಯಣ-ಯಮುನಾ ಕೇಸ್ಗೂ ಸೌಜನ್ಯ ಕೇಸ್ಗೂ 20 ದಿನ ಮಾತ್ರ ಅಂತರವಿದ್ದು, ನಾರಾಯಣ- ಯಮುನಾ ಪ್ರಕರಣದಲ್ಲಿಯೂ ಅಪರಾಧಿಗಳು ಸಿಗಲಿಲ್ಲ. ಒಟ್ಟಾರೆಯಾಗಿ ಯಾವ ಪ್ರಕರಣಗಳಲ್ಲಿಯೂ ಅಪರಾಧಿಗಳು ಪತ್ತೆಯಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಸುತ್ತಲಿನ ಕೊಲೆ-ಅತ್ಯಾಚಾರ ಪ್ರಕರಣಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ವಿರೋಧಿಸುವ ಹಾಡುಗಳನ್ನು ಮತ್ತು ಕಿರು ನಾಟಕಗಳನ್ನು ಪ್ರಸ್ತುತ ಪಡಿಸಲಾಯಿತು. ಇದೇ ವೇಳೆ ಐದು ಅಂಶಗಳ ಬೇಡಿಕೆಗಳನ್ನು ‘ಕೊಂದವರು ಯಾರು’ ಆಂದೋಲನವು ಮಂಡಿಸಿತು.
‘ಕೊಂದವರು ಯಾರು’ ಆಂದೋಲನದ ಐದು ಅಂಶಗಳ ಬೇಡಿಕೆ:
1.ವಿಶೇಷ ತನಿಖಾ ತಂಡವು ಸ್ವತಂತ್ರವಾಗಿ, ಮುಕ್ತವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ದಶಕಗಳಿಂದ ಬಗೆಹರಿಯದೆ ಉಳಿದಿರುವ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸಬೇಕು.
2.ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶದಂತೆ ತನಿಖೆಯಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಶೀಘ್ರ ಕಠಿಣ ಕ್ರಮ ಕೈಗೊಳ್ಳಬೇಕು.
3.ಲಿಂಗತ್ವ ನ್ಯಾಯ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸಲು ಎಸ್ಐಟಿಯನ್ನು ಬೆಂಬಲಿಸುವ, ಮಹಿಳಾ ಹಕ್ಕುಗಳ ಪರಿಣತರಿರುವ ಸ್ವತಂತ್ರ ಬೆಂಬಲ ತಂಡವನ್ನು ರಚಿಸಬೇಕು.
4.ಧಾರ್ಮಿಕ ಕೇಂದ್ರಗಳನ್ನೂ ಒಳಗೊಂಡಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ನಿಯಮಗಳನ್ನು ರೂಪಿಸಬೇಕು.
5.ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆಯನ್ನು ತಡೆಗಟ್ಟಲು ಶಿಫಾರಸ್ಸುಗಳನ್ನು ಮಾಡಿರುವ ಉಗ್ರಪ್ಪ ಸಮಿತಿ ವರದಿ ಮತ್ತು ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಪರಿಣತರ ಸಮಿತಿಯೊಂದನ್ನು ರಚಿಸಬೇಕು.