ಮದ್ದೂರು ಪ್ರಕರಣ | ಬಿಜೆಪಿ, ಜೆಡಿಎಸ್ನಿಂದ ಅನಗತ್ಯ ಗೊಂದಲ : ಚಲುವರಾಯಸ್ವಾಮಿ

ಚಿಕ್ಕಮಗಳೂರು : ಮಂಡ್ಯದ ಮದ್ದೂರಿನಲ್ಲಿ ನಡೆದ ಗಣಪತಿ ಸೇವಾ ಸಮಿತಿ ಗಲಾಟೆ ಪ್ರಕರಣದಲ್ಲಿ ಪೊಲೀಸ್ ಇಲಾಖೆಯಿಂದ ಸ್ವಲ್ಪವೈಫಲ್ಯ ನಡೆದಿರುವ ಬಗ್ಗೆ ಅನುಮಾನ ಇದೆ. ಈ ಬಗ್ಗೆ ತನಿಖೆ ಆಗುವವರೆಗೂ ಏನೂ ಹೇಳುವುದಿಲ್ಲ. ಗಲಾಟೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಖಚಿತ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಬುಧವಾರ ನಗರಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ನವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಪೊಲೀಸರು ಹಿಂದೂ ಸಮುದಾಯದವರನ್ನು ಅರೆಸ್ಟ್ ಮಾಡಿಲ್ಲ. ಯಾರ ಮೇಲೂ ಎಫ್ಐಆರ್ ಹಾಕಿಲ್ಲ. ಒಂದು ಸಮುದಾಯದ ಹಲವರನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಮದ್ದೂರಿನ ಶಾಂತಿ ಸಭೆಗೆ ಬಿಜೆಪಿಯವರು ಗೈರಾದ ಸಂಬಂಧ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಶಾಂತಿ ಬೇಕಿಲ್ಲ. ಅದಕ್ಕೆ ಶಾಂತಿ ಸಭೆಗೆ ಬಂದಿಲ್ಲ. ಅವರಿಗೆ ಶಾಂತಿಯೇ ಬೇಕಿಲ್ಲ ಎಂದಾದರೆ ಸಮಾಜದಲ್ಲಿ ಅವರು ಹೇಗೆ ಇರುತ್ತಾರೆ?. ಕ್ರಮ ತೆಗೆದುಕೊಂಡ ಮೇಲೂ ಬಿಜೆಪಿಯವರು ಸಭೆ ಮಾಡುತ್ತಿರುವುದು ರಾಜಕೀಯ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಬಗ್ಗೆ ಪ್ರಸ್ತಾವಿಸಿದ ಸಚಿವರು, ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಅವರ ಕಾಲದಲ್ಲಿ ಈ ರೀತಿಯ ಎಷ್ಟು ಘಟನೆ ಆಗಿಲ್ಲ?. ಕಾಂಗ್ರೆಸ್ ಬಂದಾಗಲೇ ಹೀಗೆ ಆಗುತ್ತೆ ಎನ್ನುವುದು ಸುಳ್ಳು. ಅವರು ಒಮ್ಮೆ ಹಿಂದೆ ತಿರುಗಿ ನೋಡಲಿ. ಬಂಧಿತರಲ್ಲಿ ಇಬ್ಬರು ಚನ್ನಪಟ್ಟಣದವರಾಗಿದ್ದರೆ, ಉಳಿದವರೆಲ್ಲ ಮದ್ದೂರು ಟೌನ್ನವರು ಎಂದು ಪ್ರತಿಕ್ರಿಯಿಸಿದರು. ಧರ್ಮಸ್ಥಳದ ಪ್ರಕರಣ ಕುರಿತು ಮಾತನಾಡಿದ ಸಚಿವರು, ಸತ್ಯ ಗೊತ್ತಾಗಬೇಕು, ಧಾರ್ಮಿಕ ಸ್ಥಳಕ್ಕೆ ಕಳಂಕ ಇರಬಾರದು ಎನ್ನುವ ಉದ್ದೇಶದಿಂದ ಎಸ್ಐಟಿ ತನಿಖೆ ನಡೆಯುತ್ತಿದೆ. ತನಿಖೆ ಕುರಿತ ಹೆಚ್ಚಿನ ಮಾಹಿತಿ ಗೃಹ ಸಚಿವರು ನೀಡಬೇಕಿದೆ. ನಾವೂ ಮಂಜುನಾಥ ಸ್ವಾಮಿ, ಶಿವನ ಭಕ್ತರೇ. ಬಿಜೆಪಿಯವರಿಗೆ ಮಂಜುನಾಥನನ್ನು ಗುತ್ತಿಗೆ ಕೊಟ್ಟಿಲ್ಲ. ಸರಕಾರದ ಬಗ್ಗೆ ಮಾತನಾಡಲು ಬೇರೆ ವಿಷಯ ಇಲ್ಲದೆ ಈ ವಿಷಯ ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.