ಪಹಲ್ಗಾಮ್ ದಾಳಿ | ಮೃತರಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ : ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ
ಬೆಳಗಾವಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಮೃತಪಟ್ಟ 26 ನಾಗರಿಕರಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ಅದಕ್ಕಾಗಿ ಮತ್ತೆ ಕಾಯಬೇಕಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ-ಪಾಕ್ ನಡುವೆ ಕದನ ವಿರಾಮದಿಂದಾಗಿ ಯುದ್ಧ ಸ್ಥಗಿತಗೊಂಡಿದೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಚಿಂತನೆ ಮಾಡಬೇಕು. ಇನ್ನೊಂದೆಡೆ, ಪೂರ್ಣ ಪ್ರಮಾಣದ ಯುದ್ಧ ಆಗುತ್ತದೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು, ಆದರೆ ಆಗಿಲ್ಲ ಎಂದು ತಿಳಿಸಿದರು.
ದೇಶವನ್ನು ಯಾವ ರೀತಿ ಕಟ್ಟಬೇಕು ಎನ್ನುವುದು ಮುಂದಿರುವ ಸವಾಲು. 1971ರಲ್ಲಿ ಇಂದಿರಾ ಗಾಂಧಿ ಮಾದರಿಯಲ್ಲಿ ಪಾಕಿಸ್ತಾನವನ್ನು ಕಟ್ಟಿ ಹಾಕಿದ್ದ ಬಗ್ಗೆ ಬಿಜೆಪಿಯವರೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಬಿಜೆಪಿಯವರು ಸೇರಿ ಎಲ್ಲರೂ ಯುದ್ಧ ನಿಲ್ಲಿಸಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಈಗ ಯುದ್ಧ ನಿಂತಿದೆ. ಹಾಗಾಗಿ, ಏನೂ ಮಾಡಲು ಆಗುವುದಿಲ್ಲ ಎಂದರು.
ಇನ್ನೊಂದೆಡೆ, ಪಾಕಿಸ್ತಾನ ಮತ್ತು ಭಾರತದ ಸಮಸ್ಯೆ ಅಂತಾರಾಷ್ಟ್ರೀಯ ವಿಚಾರ. ಅಮೆರಿಕ ಅಧ್ಯಕ್ಷ ಟ್ರಂಪ್ ಯಾಕೆ ಮಧ್ಯಸ್ಥಿಕೆ ವಹಿಸಿದರು ಮತ್ತು ಅವರಿಗೆ ಯಾರು ಮನವಿ ಮಾಡಿಕೊಂಡರು ಎಂಬ ವಿಚಾರ ಒಂದು ದಿನ ಹೊರಗೆ ಬರುತ್ತದೆ. ಅಲ್ಲಿಯವರೆಗೆ ನಾವೆಲ್ಲಾ ಕಾಯಬೇಕು ಎಂದು ಅವರು ಉಲ್ಲೇಖಿಸಿದರು.