ಅರಣ್ಯ ವಾಸಿಗಳನ್ನು ಒತ್ತಾಯ ಪೂರ್ವಕವಾಗಿ ಸ್ಥಳಾಂತರ ಮಾಡಲ್ಲ: ಸಚಿವ ಈಶ್ವರ್ ಖಂಡ್ರೆ
‘ತಳೇವಾಡಿ ಅರಣ್ಯವಾಸಿಗಳ ಸ್ಥಳಾಂತರ, 27 ಕುಟುಂಬಕ್ಕೆ ಚೆಕ್ ವಿತರಣೆ’

ಖಾನಾಪುರ : ಒತ್ತಾಯ ಪೂರ್ವಕವಾಗಿ ಅರಣ್ಯದಿಂದ ಅರಣ್ಯವಾಸಿಗಳನ್ನು ಹೊರಗೆ ಕಳಿಸುತ್ತಿಲ್ಲ. ಸ್ವ ಇಚ್ಛೆಯಿಂದ ತಾವೇ ಮುಂದೆ ಬಂದ ಅರಣ್ಯವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಸರಕಾರ ಮಾಡುತ್ತದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಶನಿವಾರ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹೆಮ್ಮಡಗಾದಲ್ಲಿ ಭೀಮಗಢ ಅರಣ್ಯ ವಲಯದ ತಳೇವಾಡಿ (ಗೌವಳಿ) ಗ್ರಾಮದಿಂದ ಸ್ವಯಂ ಪ್ರೇರಿತವಾಗಿ ಕಾಡಿನಿಂದ ಹೊರಗೆ ಬರಲು ಇಚ್ಛಿಸಿರುವ 27 ಕುಟುಂಬಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.
ಇಂದು ಸ್ಥಳಾಂತರಗೊಳ್ಳುತ್ತಿರುವ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಿದಾಗ, ಅವರು ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ತೊಂದರೆ ಅನುಭವಿಸಿದ್ದನ್ನು ತಿಳಿಸಿದರು. ಹೀಗಾಗಿ ಅರಣ್ಯವಾಸಿಗಳು ಮತ್ತು ಅವರ ಮುಂದಿನ ಪೀಳಿಗೆ ಉತ್ತಮ ಜೀವನ ನಡೆಸಲು ಅನುವಾಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯ ಸಿಬ್ಬಂದಿಯ ಜೊತೆಗೆ ಅರಣ್ಯವಾಸಿಗಳು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಮಾನವನ ಹಸ್ತಕ್ಷೇಪ ಇಲ್ಲದಿದ್ದರೆ ಅರಣ್ಯ ಸಮೃದ್ಧವಾಗಿ ಬೆಳೆಯುತ್ತದೆ. ಪ್ರಸಕ್ತ ಕಾಲಘಟ್ಟದಲ್ಲಿ ಅರಣ್ಯದೊಳಗಿನ ವಾಸ ಕಷ್ಟಸಾಧ್ಯ. ಜಗತ್ತು ಆಧುನಿಕವಾಗಿ ಸಾಗುತ್ತಿರುವಾಗ, ದಶಕಗಳಿಂದ ಅರಣ್ಯದಲ್ಲೇ ಮೂಲಸೌಕರ್ಯ ಇಲ್ಲದೆ ಕೆಲವರು ವಾಸಿಸುತ್ತಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಈಗ ನಡೆಯುತ್ತಿದೆ ಎಂದು ಅವರು ಹೇಳಿದರು.
ಭೀಮಗಢದ ಅರಣ್ಯ ವ್ಯಾಪ್ತಿಯಲ್ಲಿ 13 ಗ್ರಾಮಗಳಿದ್ದು ಇಲ್ಲಿ ಸುಮಾರು 754 ಕುಟುಂಬಗಳು ವಾಸಿಸುತ್ತಿವೆ. ಈ ಪೈಕಿ ತಳೇವಾಡಿಯ 27 ಕುಟುಂಬಗಳು ಸ್ವಯಂ ಪ್ರೇರಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ತೀರ್ಮಾನಿಸಿವೆ. ಹಿಂದಿನ ತಲೆಮಾರಿನ ಅರಣ್ಯವಾಸಿಗಳಿಗೆ ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಚೆನ್ನಾಗಿ ತಿಳಿದಿತ್ತು, ಆದರೆ ಇಂದಿನ ಪೀಳಿಗೆಯ ಅರಣ್ಯವಾಸಿಗಳಿಗೆ ಅಷ್ಟು ಪರಿಣತಿ ಇಲ್ಲ. ಹೀಗಾಗಿ ನಾಗರಿಕ ಸಮಾಜದಲ್ಲಿ ಅವರು ಬದುಕು ಕಟ್ಟಿಕೊಳ್ಳಲು ಈ ಸ್ಥಳಾಂತರ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಕಳೆದ ಡಿಸೆಂಬರ್ ತಿಂಗಳಲ್ಲಿ ವಿಧಾನಮಂಡಲದ ಅಧಿವೇಶನ ವೇಳೆ ಭೀಮಗಢಕ್ಕೆ ಭೇಟಿ ನೀಡಿದ್ದಾಗ, ಅರಣ್ಯದೊಳಗೆ ತಲೆಯ ಮೇಲೆ ದಿನಸಿ ಹೊತ್ತು ಬರುತ್ತಿದ್ದ ಮಹಿಳೆಯರನ್ನು ನೋಡಿ, ಕಾರು ನಿಲ್ಲಿಸಿ ಮಾತನಾಡಿಸಿದಾಗ, ಒಬ್ಬರು ತಮ್ಮ ಪತಿಯನ್ನು ಹುಲಿ ಕೊಂದು ಹಾಕಿತು ಎಂದು ದುಃಖ ತೋಡಿಕೊಂಡರೆ, ಮತ್ತೊಬ್ಬ ಮಹಿಳೆ ತಮ್ಮ ಪತಿಯ ಮೇಲೆ ಕರಡಿ ದಾಳಿ ಮಾಡಿ ಶಾಶ್ವತ ಅಂಗವೈಕಲ್ಯ ಉಂಟಾಗಿದೆ ಎಂದರು. ಈ ಘಟನೆ ತಮ್ಮ ಮನ ಕಲಕಿತು ಎಂದು ಈಶ್ವರ್ ಖಂಡ್ರೆ ಹೇಳಿದರು.
ತಳೇವಾಡಿಗೆ ಭೇಟಿ ನೀಡಿದಾಗ ಅಲ್ಲಿನ ಕುಟುಂಬದ ಸದಸ್ಯರು ಸ್ವಯಂ ಇಚ್ಛೆಯಿಂದ ಕಾಡಿನಿಂದ ಹೊರಗೆ ಹೋಗಲು ತಾವು ಸಿದ್ಧವಿರುವುದಾಗಿ ತಿಳಿಸಿದರು. ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ಪ್ರಥಮ ಹಂತದಲ್ಲಿ ಇಂದು 27 ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಉಳಿದ 5 ಲಕ್ಷ ರೂಪಾಯಿಗಳನ್ನು ಅವರು ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸಿದ ತರುವಾಯ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಕಳೆದ 20 ವರ್ಷಗಳಿಂದ ಸ್ಥಳಾಂತರದ ಬೇಡಿಕೆ ಇತ್ತು. ಈಶ್ವರ ಖಂಡ್ರೆ ಬಹಳಷ್ಟು ಮುತುವರ್ಜಿ ವಹಿಸಿ ಜನಪರವಾದ ಮಹತ್ವದ ಯೋಜನೆ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಬೇಕು ಎಂದರು.
ಅರಣ್ಯ ಇದ್ದರೆ ಮಾತ್ರ ಮಳೆ, ಬೆಳೆ ಆಗಲು ಸಾಧ್ಯ. ಅರಣ್ಯ ಉಳಿಸಲು ಪ್ರಯತ್ನಿಸಬೇಕು, ಜೊತೆಗೆ ನಾಗರಹೊಳೆ, ಬಂಡೀಪುರದ ರೀತಿಯಲ್ಲಿಯೇ ಇಲ್ಲಿಯೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಬೇಕು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಇದರ ಯಶಸ್ಸಿನ ಬಳಿಕ, ಇತರ ತಾಂಡಾಗಳ ಜನರೂ ಸ್ವ ಇಚ್ಛೆಯಿಂದ ಕಾಡಿನಿಂದ ಹೊರಬರಲು ಇಚ್ಛಿಸಿದರೆ ಸರಕಾರ ಪ್ರಯತ್ನ ಮಾಡಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಖಾನಾಪುರ ಶಾಸಕ ವಿಠ್ಠಲ ಹಲಗೇಕರ್ ಮಾತನಾಡಿ, ಇದೊಂದು ಮಹತ್ವದ ಕಾರ್ಯಕ್ರಮ. ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾಗಿ ಒಂದೇ ವರ್ಷದಲ್ಲಿ ಸ್ಥಳಾಂತರ ಕಾರ್ಯಕ್ರಮ ಆರಂಭಿಸಿದ್ದು, ಇಂದು ಚೆಕ್ ವಿತರಿಸುತ್ತಿದ್ದಾರೆ ಅವರಿಗೆ ಅಭಿನಂದನೆ ಸಲ್ಲಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯವನ್ಯಜೀವಿ ಪರಿಪಾಲಕ ಸುಭಾಷ್ ಮಾಲ್ಕಡೆ, ಕಾಂಪಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾ ದೇವಿ, ಜಿಲ್ಲಾಧಿಕಾರಿ ಮುಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌವ್ಹಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತುರಾಜ್ ಮತ್ತಿತರರರು ಪಾಲ್ಗೊಂಡಿದ್ದರು.