ಬೆಳಗಾವಿ: ಅತ್ಯಾಚಾರ ಆರೋಪದಲ್ಲಿ ಬಂಧಿತ ಲೋಕೇಶ್ವರ ಸ್ವಾಮೀಜಿಯ ಮಠ ಧ್ವಂಸಗೊಳಿಸಿದ ತಾಲೂಕು ಆಡಳಿತ

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಂಧಿತ ಆರೋಪಿ ರಾಯಭಾಗ ತಾಲೂಕಿನ ಮೇಖಳಿಯ ಲೋಕೇಶ್ವರ ಸ್ವಾಮೀಜಿಗೆ ಸೇರಿದ ಮಠವನ್ನು ತಾಲೂಕು ಆಡಳಿತ ಗುರುವಾರ ನೆಲಸಮ ಮಾಡಿದೆ.
ಬಿಗಿ ಪೊಲೀಸ್ ಬಂದೋಬಸ್ತ್, ತಹಶೀಲ್ದಾರ್ ಸಮ್ಮುಖದಲ್ಲಿ ಮೂರು ಜೇಸಿಬಿಗಳನ್ನು ಬಳಸಿ ಮಠವನ್ನು ಗುರುವಾರ ಸಂಪೂರ್ಣವಾಗಿ ಕೆಡವಲಾಯಿತು.
ಸರಕಾರಿ ಜಾಗ ಒತ್ತುವರಿ ಮಾಡಿ ಮಠ ನಿರ್ಮಾಣದ ಆರೋಪ
ಲೋಕೇಶ್ವರ ಸ್ವಾಮಿ 8-10 ವರ್ಷಗಳ ಹಿಂದೆ ಮೇಖಳಿ ಗ್ರಾಮದ ಸರಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮಠ ಮಂದಿರವನ್ನು ನಿರ್ಮಿಸಿ 'ರಾಮ ಮಂದಿರ' ಎಂದು ಹೆಸರಿಟ್ಟಿದ್ದ ಆರೋಪ ಎದುರಿಸುತ್ತಿದ್ದ. ಸರಕಾರಿ ಜಾಗ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವಂತೆ ತಾಲೂಕು ಆಡಳಿತ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ತೆರವು ಮಾಡಿರಲಿಲ್ಲ ಎನ್ನಲಾಗಿದೆ. ಈ ನಡುವೆ ಅತ್ಯಾಚಾರ ಪ್ರಕರಣದಲ್ಲಿ ಸ್ವಾಮೀಜಿಯ ಬಂಧನವಾಗುತ್ತಿದ್ದಂತೆ ರಾಯಭಾಗ ತಹಶೀಲ್ದಾರ್ ಸುರೇಶ್ ಮುಂಜೆ ಸಮ್ಮುಖದಲ್ಲಿ ಅಕ್ರಮ ಕಟ್ಟಡವನ್ನು ನೆಲಸಮ ಮಾಡಲಾಗಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಲ್ಲಿ ಲೋಕೇಶ್ವರ ಸ್ವಾಮೀಜಿಯ ವಿರುದ್ಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕಳೆದ ವಾರ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.