ಅಥಣಿ | ಹಳ್ಳ ದಾಟಲು ಯತ್ನಿಸುವಾಗ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು

ಅಥಣಿ : ಎತ್ತಿನ ಗಾಡಿಯಲ್ಲಿ ಹಳ್ಳ ದಾಟಲು ಹೋಗಿ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಂಬರಗಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮೂಲತಃ ನಾಗನೂರ ಪಿಎ ಗ್ರಾಮದ ದೀಪಕ ಸಂಜಯ ಕಾಂಬಳೆ(9), ಗಣೇಶ ಸಂಜಯ ಕಾಂಬಳೆ (7) ಎಂದು ಗುರುತಿಸಲಾಗಿದ್ದು, ವೇದಾಂತ ಸಂಜಯ ಕಾಂಬಳೆ ಎಂಬ ಬಾಲಕ ಗಾಯಗೊಂಡಿದ್ದು, ಅಥಣಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಮೃತ ಮಕ್ಕಳ ತಂದೆ ಸಂಬರಗಿ ಗ್ರಾಮದಿಂದ ನಾಗನೂರ ಪಿ.ಎ ಗ್ರಾಮದ ಕಡೆಗೆ ಎತ್ತಿನ ಬಂಡಿ ಮೂಲಕ ಹೋಗುವ ವೇಳೆ ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ಹಳ್ಳ ದಾಟಬೇಕಿತ್ತು. ಈ ವೇಳೆ ಹಳ್ಳ ದಾಟುವಾಗ ಮರಳು ತೆಗೆದ ಗುಂಡಿಯೊಳಗೆ ಎತ್ತು ಆಯತಪ್ಪಿ ಬಿದ್ದಿದ್ದರಿಂದ ಬಂಡಿಯಲ್ಲಿದ್ದ ಮೂವರು ಮಕ್ಕಳು ನೀರಿಗೆ ಬಿದ್ದಿದ್ದಾರೆ. ತಂದೆ ಸಂಜಯ ಕಾಂಬಳೆ ಓರ್ವ ಮಗನನ್ನು ರಕ್ಷಣೆ ಮಾಡಿದ್ದು, ಆತ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಳವಾದ ಗುಂಡಿಗೆ ಸಿಲುಕಿದ್ದ ಒಂದು ಎತ್ತು ಸಹ ಸ್ಥಳದಲ್ಲೇ ಸಾವನಪ್ಪಿದೆ ಎಂದು ಅಥಣಿ ಪೊಲೀಸರು ತಿಳಿಸಿದ್ದಾರೆ..
ಗ್ರಾಮಸ್ಥರ ಸಹಾಯದಿಂದ ಮಕ್ಕಳನ್ನು ನೀರಿನಿಂದ ಹೊರ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.