ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಶಾಶ್ವತ ವಿರೋಧ ಪಕ್ಷ : ದಿನೇಶ್ ಅಮಿನ್ ಮಟ್ಟು
ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ ವಿಚಾರ ಸಂಕಿರಣ

ಮೈಸೂರು : ಪತ್ರಿಕೋದ್ಯಮದಲ್ಲಿಯೂ ಎಲ್ಲ ಜನ ವರ್ಗಗಳ ಪ್ರಾತಿನಿಧ್ಯ ಇರಬೇಕು. ಎಲ್ಲ ಅನುಭವ ಲೋಕಗಳು ಬರಬೇಕು. ಇಲ್ಲದಿದ್ದರೆ ಪತ್ರಿಕೋದ್ಯಮ ವಿಕಲಾಂಗವಾಗುತ್ತದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಮತ್ತು ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮ ಸಮೀಕ್ಷೆಯೊಂದರಲ್ಲಿ ಮಾಧ್ಯಮ ಕಚೇರಿಗಳಲ್ಲಿ ಯಾವ ಜಾತಿಯವರು ಬಹುತೇಕ ಜನರಿದ್ದಾರೆ. ದಲಿತರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂಬುದು ಬಹಿರಂಗಗೊಂಡಿತು. ತಳ ಸಮುದಾಯಗಳ ಶೋಷಿತರಿಲ್ಲದ ಮಾಧ್ಯಮಗಳು ನಮ್ಮದು ಅನ್ನಿಸುತ್ತದೆಯೇ? ಎಂದು ಪ್ರಶ್ನಿಸಿದರು.
ಕರ್ನಾಟಕದ 100 ಜನ ಬರಹಗಾರರ, ಕತೆಗಾರರ ಮತ್ತು ಕಾದಂಬರಿಕಾರರಲ್ಲಿ 50 ಜನರು ದಲಿತ, ಹಿಂದುಳಿದವರು ಇದ್ದಾರೆ. ಆದರೆ, 100 ಜನ ಪತ್ರಕರ್ತರಲ್ಲಿ 10 ಜನ ಕೂಡ ಸಿಗುವುದಿಲ್ಲ ಎಂದರು.
1920ರಲ್ಲಿ ಅಂಬೇಡ್ಕರ್ ಅವರು ಮೂಕನಾಯಕ ಪತ್ರಿಕೆ ಆರಂಭಿಸಿದರು. 100 ವರ್ಷಗಳ ನಂತರವೂ ಅದೇ ಪರಿಸ್ಥಿತಿಯಲ್ಲಿದ್ದೇವೆ. ಏನಾದರೂ ಬದಲಾವಣೆ ಆಗಿದೆಯೇ? ಯಾಕೇ ಬದಲಾಗಿಲ್ಲ, ಅವಲೋಕನ ಮಾಡಬೇಕಿದೆ ಎಂದು ನುಡಿದರು.
ಮಾಧ್ಯಮ ವಿರೋಧ ಪಕ್ಷ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಶಾಶ್ವತ ವಿರೋಧ ಪಕ್ಷ. ಪ್ರಸ್ತುತ ಮಾಧ್ಯಮ ಆಡಳಿತ ಪಕ್ಷವಾಗಿ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಮಾತ್ರ ವಿರೋಧ ಪಕ್ಷವಾಗಿದೆ. ಆಡಳಿತ ಪಕ್ಷಕ್ಕೆ ಕೇಳಬೇಕಾದ ಪ್ರಶ್ನೆಯನ್ನು ವಿರೋಧ ಪಕ್ಷಕ್ಕೆ ಕೇಳಲಾಗುತ್ತಿದೆ ಎಂದು ವಿಷಾದಿಸಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎನ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ನಟರಾಜ್ ಶಿವಣ್ಣ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಧ್ಯಾಪಕರಾದ ಪ್ರೊ.ಸಿ.ಕೆ. ಪುಟ್ಟಸ್ವಾಮಿ, ಪ್ರೊ.ಎಂ.ಎಸ್.ಸಪ್ನಾ ಮುಂತಾದವರಿದ್ದರು.