ಬಲವಂತದ ಭೂಸ್ವಾಧೀನ ವಿರೋಧಿಸಿ ಜೂ.25ಕ್ಕೆ ‘ದೇವನಹಳ್ಳಿ ಚಲೋ’

ಬೆಂಗಳೂರು/ದೇವನಹಳ್ಳಿ: ಚನ್ನರಾಯಪಟ್ಟಣದಲ್ಲಿನ ಬಲವಂತದ ಭೂ ಸ್ವಾಧೀನವನ್ನು ವಿರೋಧಿಸಿ ಜೂ.25 ರಂದು ‘ದೇವನಹಳ್ಳಿ ಚಲೋ’ ನಡೆಸಲು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ತೀರ್ಮಾನಿಸಿದೆ.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಗಳ ಒಕ್ಕೂಟ ಭೂಸ್ವಾಧೀನ ವಿರೋಧಿ ಹೋರಾಟದ 1150ನೆ ದಿನದಂದು ರೈತರನ್ನು ಬೆಂಬಲಿಸಿ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸರಕಾರಗಳಿಗೆ ಈ ಭೂಮಿ ಬರೀ ಮಾರಾಟದ ಸರಕಷ್ಟೇ. ಆದರೆ ಇಲ್ಲಿನ ರೈತರಿಗೆ ಇದು ಬದುಕು. ಯಾವುದೇ ಕಾರಣಕ್ಕೂ ನಾವು ಭೂಮಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ಹೋರಾಟ ಬರೀ ದೇವನಹಳ್ಳಿಯ ಹೋರಾಟವಾಗಿ ಮಾತ್ರ ಉಳಿದಿಲ್ಲ. ಇಡೀ ರಾಜ್ಯದ ಹೋರಾಟವಾಗಿದೆ ಎಂದರು.
ಇಡೀ ರಾಜ್ಯದ ರೈತ ಸಂಘಟನೆಗಳು ಮತ್ತು ಇತರ ಎಲ್ಲ ಪ್ರಗತಿಪರ ಸಂಘಟನೆಗಳು ಈ ಹೋರಾಟವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ, ಜೂ.25ಕ್ಕೆ ದೇವನಹಳ್ಳಿ ಚಲೋ ಹೆಸರಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಎಲ್ಲ ಹೋರಾಟಗಾರರು, ಬೆಂಬಲಿಗರು ಸೇರಿ ಪ್ರತಿರೋಧವನ್ನು ವ್ಯಕ್ತಪಡಿಸಬೇಕು. ಕನಿಷ್ಠ 10 ಸಾವಿರ ಜನರನ್ನು ಒಳಗೊಂಡ ಬೃಹತ್ ಕಾರ್ಯಕ್ರಮವಾಗಬೇಕು. ಇದಕ್ಕಾಗಿ ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲ ಸಹಭಾಗಿ ಸಂಘಟನೆಗಳು ರಾಜ್ಯದ ವಿವಿಧ ಭಾಗಗಳಿಂದ ತಮ್ಮ ಕಾರ್ಯಕರ್ತರುಗಳನ್ನು ಕರೆ ತರಬೇಕು ಎಂದು ಕರೆ ನೀಡಿದರು.
ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಹಿಂದಿನ ಕೋಮುವಾದಿ ಸರಕಾರವನ್ನು ಸೋಲಿಸಲು ಹಗಲಿರುಳು ಶ್ರಮಿಸಿ ಅಸ್ತಿತ್ವಕ್ಕೆ ತಂದ ಸರಕಾರ ಇದು. ಆದರೆ ಸಿದ್ದರಾಮಯ್ಯ ಸರಕಾರದ ಮೇಲಿಟ್ಟಿದ್ದ ನಂಬಿಕೆ ಇಂದು ಸಂಪೂರ್ಣ ಹುಸಿಯಾಗಿದೆ. 'ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಭೂಸ್ವಾಧೀನ ಮಾಡಿಕೊಳ್ಳಬಾರದು, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಬಲವಂತದ ಭೂಸ್ವಾಧೀನವನ್ನು ಮಾಡುವುದಿಲ್ಲ ಮತ್ತು ಈ ಭೂಸ್ವಾಧೀನವನ್ನು ಕೈಬಿಡುತ್ತೇವೆ' ಎಂದು ಹೇಳಿದ್ದ ಮುಖ್ಯಮಂತ್ರಿ ಇಂದು ವಚನಭ್ರಷ್ಟರಾಗಿದ್ದಾರೆ. ಎಲ್ಲ ಸಂಘಟನೆಗಳು ಚನ್ನರಾಯಪಟ್ಟಣ ರೈತರ ಜೊತೆಗೆ ನಿಂತು ಅವರನ್ನು ಗೆಲ್ಲಿಸಲೇಬೇಕು. ಈ ಕಾರ್ಪೊರೇಟ್ ಪರವಾದ ಸರಕಾರಗಳನ್ನು ಹಿಮ್ಮೆಟ್ಟಿಸಲೇಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ರಾಜ್ಯ ರೈತ ಸಂಘದ ಮುಖಂಡರಾದ ಚಾಮರಸ ಮಾಲಿ ಪಾಟೀಲ, ಪ್ರಾಂತ ರೈತ ಸಂಘದ ಅಧ್ಯಕ್ಷ ಯು. ಬಸವರಾಜು, ಸಿಐಟಿಯು ಸಂಘಟನೆಯ ಮೀನಾಕ್ಷಿ ಸುಂದರ, ವರಲಕ್ಷ್ಮೀ, ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಮರಿಯಪ್ಪ, ಹೋರಾಟಗಾರರಾದ ಕಾರಳ್ಳಿ ಶ್ರೀನಿವಾಸ್, ಪ್ರಭಾ ಬೆಳವಂಗಲ, ನವೀನ್, ಚಂದ್ರ ತೇಜಸ್ವಿ, ರಮೇಶ್ ಸಂಕ್ರಾಂತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ತಾಕತ್ತಿದ್ದರೆ ಒಂದಿಂಚು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಿ: ನೂರ್ ಶ್ರೀಧರ್ ಸವಾಲು
ಸದಾ ರೈತರ ಪರವಾಗಿ ಇರುವುದಾಗಿ ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂದಿನ ಕಾಂಗ್ರೆಸ್ ಸರಕಾರ ಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ರೈತ, ಜನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಒಂದು ಕಡೆ ರೈತರ ಕೈಯಲ್ಲಿರುವ ಭೂಮಿಯನ್ನು ಭೂಸ್ವಾಧೀನದ ಮೂಲಕ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ, ಮತ್ತೊಂದೆಡೆ ಬಗರ್ ಹುಕುಂ ಸಾಗುವಳಿದಾರರಿಗೆ ಭೂ ಹಂಚಿಕೆ ಮಾಡದಿರುವುದು, ಈ ಸರಕಾರದ ರೈತ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ ಎಂದು ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಜನ ವಿರೋಧಿ ಸರಕಾರವನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಚನ್ನರಾಯಪಟ್ಟಣ ಹೋರಾಟದ ಹಾದಿಯಲ್ಲಿ ಎಲ್ಲ ರೀತಿಯ ಪ್ರತಿರೋಧಗಳನ್ನು, ಪ್ರತಿಭಟನೆಗಳನ್ನು ಮಾಡುತ್ತಲೇ ಬಂದಿದೆ. ಆದರೆ ಜೂನ್ 25ರಂದು ನಡೆಯಲಿರುವ ದೇವನಹಳ್ಳಿ ಚಲೋ ಹಿಂದಿನ ಹೋರಾಟದಂತೆ ಮತ್ತೊಂದು ಹೋರಾಟವಾಗಿರುವುದಿಲ್ಲ, ಇದು ನಿರ್ಣಾಯಕ ಹೋರಾಟ. ಯಾವುದೇ ಕಾರಣಕ್ಕೂ ನಾವು ಬರಿಗೈಯಲ್ಲಿ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಇಲ್ಲಿನ ರೈತರು ತಮ್ಮ ಮನೆಯ ದನ, ಕರು, ಕುರಿ ಎಲ್ಲವುಗಳ ಜೊತೆ ಬಂದು ಸೇರಿಕೊಳ್ಳೋಣ, ಅದನ್ನು ಮೀರಿ ಅದು ಹೇಗೆ ಭೂಸ್ವಾಧೀನ ಮಾಡುತ್ತಾರೋ ನೋಡೋಣ, ತಾಕತ್ತಿದ್ದರೆ ಒಂದಿಂಚು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಿ ನೋಡೋಣ ಎಂದು ಸರಕಾರಕ್ಕೆ ಸವಾಲು ಎಸೆದರು.