ಸತ್ಯದ ಧ್ವನಿಯ ಹತ್ತಿಕ್ಕುವ ಮತ್ತೊಂದು ಪ್ರಯತ್ನ?

ಗುಜರಾತ್ನ ಒಂದು ದೊಡ್ಡ ಪತ್ರಿಕೆ ‘ಗುಜರಾತ್ ಸಮಾಚಾರ್’ ನ ಹಲವಾರು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಅದರ ಮಾಲಕ ಬಾಹುಬಲಿ ಶಾ ಅವರನ್ನು 25 ವರ್ಷಗಳ ಹಿಂದಿನ ಪ್ರಕರಣದಲ್ಲಿ ಬಂಧಿಸಲಾಗಿದೆ.
ಈ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ‘‘ಗುಜರಾತ್ ಸಮಾಚಾರ್ ಅನ್ನು ಮೌನಗೊಳಿಸುವ ಪ್ರಯತ್ನ ಕೇವಲ ಒಂದು ಪತ್ರಿಕೆಯಲ್ಲ, ಇಡೀ ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಮತ್ತೊಂದು ಪಿತೂರಿ’’ಎಂದು ಹೇಳಿದ್ದಾರೆ.
‘‘ಬಾಹುಬಲಿ ಶಾ ಬಂಧನ ಭಯಗೊಳಿಸುವ ಮೋದಿ ಸರಕಾರದ ರಾಜಕೀಯದ ಒಂದು ಭಾಗವಾಗಿದೆ. ಈಗ ಆ ಭಯದ ರಾಜಕೀಯ ಮೋದಿ ಸರಕಾರದ ಗುರುತಾಗಿ ಬಿಟ್ಟಿದೆ. ಆದರೆ ದೇಶವನ್ನು ಕೋಲುಗಳಿಂದ ಅಥವಾ ಭಯದಿಂದ ನಡೆಸಲಾಗುವುದಿಲ್ಲ. ದೇಶ ಸಂವಿಧಾನ ಹಾಗೂ ಸತ್ಯದಿಂದ ನಡೆಯುತ್ತದೆ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮಾಧ್ಯಮದ ಬಹಳಷ್ಟು ಭಾಗ ಈಗಾಗಲೇ ಮೌನವಾಗಿದೆ.ಆದರೆ ಕೆಲವು ಪತ್ರಿಕೆಗಳು, ಕೆಲವು ಸಂಪಾದಕರು ಮತ್ತು ಕೆಲವು ಪತ್ರಕರ್ತರು ಭಯಪಡಲು ಅಥವಾ ತಲೆಬಾಗಲು ಬಯಸುವುದಿಲ್ಲ. ಸತ್ಯವನ್ನು ಮುಚ್ಚಿಹಾಕುವ ಮತ್ತು ಸುಳ್ಳಿನ ಬಲೂನನ್ನು ಎಲ್ಲಾ ರೀತಿಯಲ್ಲಿ ಊದುವ ಪ್ರಯತ್ನವನ್ನು ಆ ಕೆಲವೇ ಕೆಲವು ವಸ್ತುನಿಷ್ಠ ಪತ್ರಕರ್ತರು ವಿಫಲಗೊಳಿಸುತ್ತಾರೆ.
ಯಾವುದೇ ರಾಜ್ಯದ ಯಾವುದೇ ಬೀದಿ ಮೂಲೆಯಲ್ಲಿ ಸುದ್ದಿಗಳನ್ನು ಹುಡುಕಲು ಮತ್ತು ಬರೆಯಲು ಧೈರ್ಯ ಮಾಡುವ ಯಾವುದೇ ಪತ್ರಕರ್ತ ಉಳಿಯದಂತೆ ಸರಕಾರ ತನ್ನ ಏಜೆನ್ಸಿಗಳ ಮೂಲಕ ಯತ್ನಿಸುತ್ತಲೇ ಇರುತ್ತದೆಯೇ? ಈ ದೇಶದಲ್ಲಿ ಬೊಬ್ಬೆ ಹಾಕುವ, ಸುಳ್ಳು ಹೇಳುವ, ದ್ವೇಷ ಕಾರುವ, ಜನರನ್ನು ಎತ್ತಿ ಕಟ್ಟುವ ಮಡಿಲ ಮೀಡಿಯಾಗಳು ಮಾತ್ರ ಉಳಿಯಬೇಕು ಎಂದು ಸರಕಾರ ನಿರ್ಧಾರ ಮಾಡಿದೆಯೇ?
‘ಗುಜರಾತ್ ಸಮಾಚಾರ್’ ಗುಜರಾತ್ನ ಅತಿದೊಡ್ಡ ಪತ್ರಿಕೆ ಮಾತ್ರವಲ್ಲದೆ ಭಾರತದ ಯಾವುದೇ ಪ್ರಾದೇಶಿಕ ಭಾಷೆಯ ಅತ್ಯಂತ ಪ್ರಮುಖ ಪತ್ರಿಕೆಯಾಗಿದೆ. ಇದು 1932ರಿಂದ ಪ್ರಕಟವಾಗುತ್ತಿದೆ. ಅದರ ಮಾಲಕ 73 ವರ್ಷದ ಅನಾರೋಗ್ಯ ಪೀಡಿತ ಬಾಹುಬಲಿ ಶಾ ಅವರನ್ನು ಬಂಧಿಸಲಾಗಿದೆ.
ಅವರ ಕಿರಿಯ ಸಹೋದರ ಮತ್ತು ವ್ಯವಸ್ಥಾಪಕ ಸಂಪಾದಕ ಶ್ರೇಯಂಶ್ ಶಾ ಅವರನ್ನೂ ವಿಚಾರಣೆ ಮಾಡಲಾಗಿದೆ.
ಅನಾರೋಗ್ಯ ಪೀಡಿತ ಬಾಹುಬಲಿ ಶಾ ಅವರಿಗೆ ಮೇ 31ರವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ.
ಬಾಹುಬಲಿ ಶಾ ಅವರ ಬಂಧನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ. 20-25 ವರ್ಷಗಳ ಹಳೆಯ ಪ್ರಕರಣದಲ್ಲಿ ವಿಚಾರಣೆ ಮತ್ತು ಬಂಧನ ಮಾಡಲಾಗಿದೆ ಎಂಬುದು ನಿಜವೇ?
ಗುಜರಾತ್ ಸಮಾಚಾರ್ನ ವ್ಯವಸ್ಥಾಪಕ ಸಂಪಾದಕ ಮತ್ತು ಜಿಎಸ್ ಟಿವಿಯ ಮಾಲಕರಾದ ಶ್ರೇಯಶ್ ಶಾ ಅವರ ಪತ್ನಿ ಮತ್ತು ಗುಜರಾತ್ ಸಮಾಚಾರ್ನ ಮತ್ತೊಬ್ಬ ಸಂಪಾದಕಿ ಸ್ಮತಿಬೆನ್ ತೀವ್ರ ಅನಾರೋಗ್ಯದಿಂದ ಬಳಲಿ ಎಪ್ರಿಲ್ 17ರಂದು ನಿಧನರಾಗಿದ್ದರು. 20-25 ವರ್ಷಗಳಷ್ಟು ಹಳೆಯ ಪ್ರಕರಣದಲ್ಲಿ ಒಂದು ತಿಂಗಳ ಶೋಕಾಚರಣೆಯೂ ಕಳೆದಿಲ್ಲದ ಹೊತ್ತಲ್ಲಿ ಆ ಕುಟುಂಬಕ್ಕೆ ಇಂಥದೊಂದು ತೊಂದರೆ ಕೊಡಬೇಕಿತ್ತೇ?
ಗುಜರಾತ್ನ ಅತಿದೊಡ್ಡ ಪತ್ರಿಕೆಯ ಮಾಲಕರನ್ನು ಅಂತಹ ಸ್ಥಿತಿಯಲ್ಲಿ ಇರಿಸಬಹುದು ಎಂಬ ಅಂಶದ ಬಗ್ಗೆ ಮೌನಕ್ಕಿಂತ ಹೆಚ್ಚಿನ ಭಯ ಇದೆ.
ಇದು ಪತ್ರಿಕೆಯ ಮಾಲಕರ ಬಂಧನದ ಪ್ರಕರಣವಾಗಿರುವುದ ರಿಂದ ಬಂಧಿಸಿದ ತಕ್ಷಣ ಹೇಳಿಕೆ ಬರಬೇಕಿತ್ತು. ಪತ್ರಿಕೆಯ ಪ್ರಧಾನ ಸಂಪಾದಕ ಶ್ರೇಯಶ್ ಶಾ ಮೇಲಿನ ಈ.ಡಿ. ದಾಳಿ ಮತ್ತು ಅವರ ಸಹೋದರನ ಬಂಧನವನ್ನು ರಾಜಕೀಯ ಸೇಡಿನ ಕೃತ್ಯ ಎಂದು ಹೇಳಿದ್ದನ್ನು ‘ಹಿಂದೂಸ್ತಾನ್ ಟೈಮ್ಸ್’ನ ವರದಿಯಲ್ಲಿ ಪ್ರಕಟಿಸಲಾಗಿದೆ.
36 ಗಂಟೆಗಳ ದಾಳಿಯ ನಂತರ ಈ.ಡಿ. ಲಿಖಿತ ಸೂಚನೆ ಇಲ್ಲದೆ ಬಾಹುಬಲಿ ಶಾ ಅವರನ್ನು ಬಂಧಿಸಿದೆ ಎಂದು ಹೇಳಲಾಗಿದೆ. ಬಾಹುಬಲಿ ಶಾ ಮೇಲೆ ಕೆಲವು ವಿಷಯಗಳನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದು ಪ್ರಧಾನಿ ಮೋದಿ ಅವರ ರಾಜ್ಯದ ಪತ್ರಿಕೆ. ಅಲ್ಲಿ ಅವರು 13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ತನ್ನ ತವರು ರಾಜ್ಯದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಅವರಿಗೆ ಕಾಣುತ್ತಿಲ್ಲವೇ?
ಗುಜರಾತ್ನ ವಿರೋಧ ಪಕ್ಷದ ನಾಯಕರು ಪತ್ರಿಕೆಯ ವಿರುದ್ಧ ತೆಗೆದುಕೊಂಡ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುಜರಾತ್ನಲ್ಲಿ ಪತ್ರಿಕೋದ್ಯಮದ ಕತ್ತು ಹಿಸುಕುವ ಪ್ರಯತ್ನ ಇದಾಗಿದೆ ಎಂದು ಆಮ್ ಆದ್ಮಿ ಪಕ್ಷದ ಶಾಸಕ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
ಸರಕಾರ ನಿರ್ಭೀತ ಮತ್ತು ಪಕ್ಷಪಾತವಿಲ್ಲದ ಗುಜರಾತ್ ಸಮಾಚಾರವನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದೆ. 93 ವರ್ಷದ ಈ ಪತ್ರಿಕೆ ಸರಕಾರದ ವಿರುದ್ಧ ಮಾತನಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟ್ವೀಟ್ ಮಾಡಿದ್ದಾರೆ.
ಬಾಹುಬಲಿ ಶಾ ಅವರನ್ನು ಈ.ಡಿ. ಬಂಧಿಸಿರುವುದು ತುಂಬಾ ನಾಚಿಕೆಗೇಡಿನ ಸಂಗತಿ. ನಾವು ಗುಜರಾತ್ ಸಮಾಚಾರಕ್ಕೆ ಬೆಂಬಲ ನೀಡುತ್ತೇವೆ. ಕಳೆದ 25 ವರ್ಷಗಳಿಂದ ಮೋದಿ-ಶಾ ಅವರ ನೀತಿಗಳನ್ನು ಈ ಪತ್ರಿಕೆ ಟೀಕಿಸಿದ ರೀತಿಗೆ ಸೇಡು ತೀರಿಸಿಕೊಳ್ಳುವ ಭಾವನೆಯೊಂದಿಗೆ ಈ ಕೃತ್ಯವನ್ನು ಮಾಡಲಾಗಿದೆ ಎಂದು ಗುಜರಾತ್ನ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಮಾಧ್ಯಮಗಳ ಮೇಲಿನ ಇಂತಹ ದಾಳಿಗಳನ್ನು ಬಿಜೆಪಿ ಏಕೆ ವಿರೋಧಿಸುವುದಿಲ್ಲ?
ಪಹಲ್ಗಾಮ್ ದಾಳಿಯ ನಂತರ, ಹಿಂದಿಯ ಬಹಳ ದೊಡ್ಡ ಯೂಟ್ಯೂಬ್ ಚಾನೆಲ್ 4ಪಿಎಂ ಅನ್ನು ಮುಚ್ಚಲಾಯಿತು. ಆ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಸಹ ಮೋದಿ ಸರಕಾರಕ್ಕೆ ಸಾಧ್ಯವಾಗಲಿಲ್ಲ.
ಆನಂತರ ಕೋರ್ಟ್ ತೀರ್ಪು ಪ್ರಕಟಿಸುವ ಮೊದಲು, 4ಪಿಎಂ ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು. ಆದರೆ ಚಾನೆಲ್ನ ಆದಾಯದ ಮೇಲೆ ಪರಿಣಾಮ ಬೀರಿತು. ಅದರ ಲಕ್ಷಾಂತರ ವೀಕ್ಷಕರಿಗೆ ಸುದ್ದಿ ಸಿಗಲಿಲ್ಲ.
ಇಂತಹ ಕ್ರಮದಿಂದ, ಪತ್ರಿಕೆ ಮತ್ತು ಚಾನೆಲ್ ಅನ್ನು ಹೆದರಿಸುವುದಲ್ಲದೆ, ಅದರ ಲಕ್ಷಾಂತರ ಓದುಗರನ್ನು ಸಹ ಹೆದರಿಸಲಾಗುತ್ತಿದೆ.
ಪಹಲ್ಗಾಮ್ ದಾಳಿಯ ನಂತರ, ಗುಜರಾತ್ ಸಮಾಚಾರ್ನ ಟ್ವಿಟರ್ ಹ್ಯಾಂಡಲ್ ಅನ್ನು ಮುಚ್ಚಲಾಯಿತು.
2017ರಿಂದ 2025ರ ನಡುವೆ, ಕನಿಷ್ಠ ಎಂಟು ದೊಡ್ಡ ಮಾಧ್ಯಮ ಸಂಸ್ಥೆಗಳ ಮೇಲೆ ಈಡಿ, ಸಿಬಿಐ ಮತ್ತು ಐಟಿ ದಾಳಿ ಮಾಡಲಾಗಿದೆ. ದೈನಿಕ್ ಭಾಸ್ಕರ್, ಭಾರತ್ ಸಮಾಚಾರ್, ನ್ಯೂಸ್ ಲಾಂಡ್ರಿ, ದಿ ವೈರ್, ನ್ಯೂಸ್ ಕ್ಲಿಕ್, ಬಿಬಿಸಿ ಮತ್ತು ಎನ್ಡಿಟಿವಿ ಮೇಲೆ ದಾಳಿ ನಡೆದಿದೆ.
2017ರಲ್ಲಿ ಎನ್ಡಿಟಿವಿ ಮೇಲಿನ ದಾಳಿಯ ಬಗ್ಗೆ ಏನೆಲ್ಲ ಹೇಳಲಾಯಿತು. ಕೊನೆಯಲ್ಲಿ ಸಿಬಿಐ ಹೈಕೋರ್ಟ್ಗೆ ಯಾವುದೇ ತಪ್ಪಿಲ್ಲ ಎಂದು ಹೇಳಿದೆ. ಪ್ರಕರಣವನ್ನು ಮುಚ್ಚಲಾಯಿತು.
ಆದರೆ ಆ ನಡುವೆ ಎನ್ಡಿಟಿವಿ ಪ್ರಣಯ್ ರಾಯ್ ಕೈಯಿಂದ ತಪ್ಪಿ ಹೋಯಿತು. ಅದು ಅದಾನಿ ತೆಕ್ಕೆಗೆ ಸೇರಿತು. ಈಗ ಅದು ಇನ್ನೊಂದು ಮಡಿಲ ಮೀಡಿಯಾವಾಗಿದೆ.
ಅದು ಸ್ವತಂತ್ರ ಚಾನೆಲ್ ಆಗಿದ್ದಾಗ ಅದರಲ್ಲಿ ಹಲವು ಅಕ್ರಮಗಳು ಕಾಣುತ್ತಿದ್ದವು, ದಾಳಿ ಆಗುತ್ತಿತ್ತು, ವಿಚಾರಣೆ ಆಗುತ್ತಿತ್ತು. ಆದರೆ ಅದು ಮಡಿಲ ಮೀಡಿಯಾ ಆದ ಕೂಡಲೇ ಎಲ್ಲ ವಿಚಾರಣೆ, ದಾಳಿ ನಿಂತು ಹೋಯಿತು.
ನ್ಯೂಸ್ ಕ್ಲಿಕ್ನ ಸಂಪಾದಕರನ್ನು ಅಕ್ರಮವಾಗಿ ಬಂಧಿಸಲಾ ಯಿತು. ದಿಲ್ಲಿ ಪೊಲೀಸರು ಮತ್ತು ಈ.ಡಿ. ಕೂಡ ದಾಳಿ ಮಾಡಿದೆ.
ಅಕ್ರಮವಾಗಿ ಬಂಧಿಸಲಾಗಿದೆ ಎಂಬ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿದೆ. ಆದರೆ ಅಷ್ಟರೊಳಗೆ ನ್ಯೂಸ್ ಕ್ಲಿಕ್ ವೆಬ್ ಸೈಟ್ ಬಂದ್ ಆಗಿ ಹೋಯಿತು. ಅದರ ಪತ್ರಕರ್ತರು ಕೆಲಸ ಕಳಕೊಂಡರು.
ಈಗ ಇಡೀ ದೇಶದಲ್ಲಿ ಮಡಿಲ ಮೀಡಿಯಾದ ಬಗ್ಗೆ ಜನರು ನಾಚಿಕೆಪಡುತ್ತಿರುವಾಗ, ನಿರಂತರವಾಗಿ ಪ್ರಶ್ನೆಗಳನ್ನು ಕೇಳುವ ಗುಜರಾತ್ನ ಪತ್ರಿಕೆಯ ವಿರುದ್ಧ ಇಷ್ಟು ದೊಡ್ಡ ಕ್ರಮ ಕೈಗೊಳ್ಳಲಾಗಿದೆ.
ಟೀಕೆ ಪ್ರಜಾಪ್ರಭುತ್ವದ ಆತ್ಮ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದನ್ನು ನೆನಪಿಸುತ್ತಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.
ಗುಜರಾತ್ ಸಮಾಚಾರ್ 93 ವರ್ಷಗಳ ಹಳೆಯ ಸಂಸ್ಥೆ. ವಿಮರ್ಶಕರನ್ನು ಬಂಧಿಸುವುದು ಭಯಭೀತ ಸರ್ವಾಧಿಕಾರಿಯ ಮೊದಲ ಚಿಹ್ನೆ. ಬಿಜೆಪಿಯೊಂದಿಗೆ ರಾಜಿ ಮಾಡಿಕೊಳ್ಳದವರು, ಈ ಸರಕಾರದ ವಿರುದ್ಧ ಧ್ವನಿ ಎತ್ತುವವರು ಜೈಲಿಗೆ ಹೋಗಬೇಕಾಗುತ್ತದೆ. ಸರಕಾರ ತನ್ನ ಸ್ವಂತ ಲಾಭಕ್ಕಾಗಿ ಸ್ವತಂತ್ರ ಮಾಧ್ಯಮದ ಮೇಲೆ ಒತ್ತಡ ಹೇರುವುದು ಮತ್ತು ಬಳಸುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಖರ್ಗೆ ಹೇಳಿದ್ದಾರೆ.
ಮೋದಿ ಸರಕಾರದ ಅವಧಿಯಲ್ಲಿ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳನ್ನು ಗುರಿಯಾಗಿಸಲಾಗಿದೆ. ನಕಲಿ ಪ್ರಕರಣಗಳ ಹಿಂದೆ ನ್ಯಾಯಕ್ಕಾಗಿ ವರ್ಷಗಳ ಹೋರಾಟದಲ್ಲಿ ನ್ಯಾಯಾಲಯದಲ್ಲಿ ನ್ಯಾಯ ಸಿಗುವಾಗ ಕೆಲಸ ಮುಗಿದಿರುತ್ತದೆ. ಸಂಸ್ಥೆಯೇ ಬಂದ್ ಆಗಿರುತ್ತದೆ. ಅದರ ಪತ್ರಕರ್ತರು ಬೀದಿಗೆ ಬಿದ್ದಿರುತ್ತಾರೆ.
ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಸಂಸ್ಥೆಯ ಪ್ರಕಾರ, 2010ರಿಂದ ಭಾರತದಲ್ಲಿ 62 ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಗಿದೆ. 47 ಪತ್ರಕರ್ತರನ್ನು ಕೊಲ್ಲಲಾಗಿದೆ.
ವರದಿಯೊಂದರಲ್ಲಿ, 400ಕ್ಕೂ ಹೆಚ್ಚು ಪತ್ರಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಅಧ್ಯಯನ ಮಾಡಲಾಗಿದೆ.
ಪತ್ರಕರ್ತರ ವಿರುದ್ಧ ದಾಖಲಾಗಿರುವ 244 ಪ್ರಕರಣಗಳಲ್ಲಿ ಶೇ. 65ಕ್ಕಿಂತ ಹೆಚ್ಚು ಪ್ರಕರಣಗಳು 2023ರ ಅಕ್ಟೋಬರ್ 30ರ ವೇಳೆಗೆ ಪೂರ್ಣಗೊಂಡಿಲ್ಲ. ಶೇ. 40 ಪ್ರಕರಣಗಳಲ್ಲಿ, ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಲಿಲ್ಲ. ಕೇವಲ ಶೇ. 16 ಪ್ರಕರಣಗಳಲ್ಲಿ ಮಾತ್ರ ಪ್ರಕರಣ ಇತ್ಯರ್ಥವಾಗಿದೆ. ಶೇ. 6 ಪ್ರಕರಣಗಳಲ್ಲಿ ಅಂತಿಮ ತೀರ್ಪು ಬಂದಿದೆ.
ದೊಡ್ಡ ನಗರಗಳಿಗಿಂತ ಸಣ್ಣ ನಗರಗಳ ಹೆಚ್ಚಿನ ಪತ್ರಕರ್ತರು ಕಾನೂನಿನ ಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಅವರಿಗೆ, ಈ ಹೋರಾಟ ಹಸಿವಿನ ಹೋರಾಟವಾಗುತ್ತದೆ. ಪ್ರಕರಣದ ವಿರುದ್ಧ ಹೋರಾಡಿ ಅವರು ತಮ್ಮ ಉದ್ಯೋಗವನ್ನು ಸಹ ಕಳೆದುಕೊಳ್ಳುತ್ತಾರೆ. ಅಂದರೆ ಅವರ ಜೀವನೋಪಾಯಕ್ಕೇ ಕೊಡಲಿಯೇಟು ಬಿದ್ದಿರುತ್ತದೆ. ಅವರ ಕುಟುಂಬ ಹತಾಶವಾಗಿ ಬೀದಿಗೆ ಬೀಳುತ್ತದೆ.