ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಚೀನಾ ನಿಜವಾಗಿಯೂ ತಟಸ್ಥವಾಗಿ ಉಳಿಯಬಹುದೇ?

ಚೀನಾದಿಂದ ಹೆಚ್ಚುವರಿ ಶಸ್ತ್ರಾಸ್ತ್ರಗಳು ಮತ್ತು ಸಾಲ ಸಿಗದೇ ಹೋದರೆ ಪಾಕಿಸ್ತಾನ ಭಾರತವನ್ನು ಯುದ್ಧದಲ್ಲಿ ಎದುರಿಸುವುದು ಸಾಧ್ಯವೇ ಇಲ್ಲ.
ಇದು ಭಾರತಕ್ಕೂ ಗೊತ್ತು, ಚೀನಾಕ್ಕೂ ತಿಳಿದಿದೆ.
ಹೀಗಿರುವಾಗ, ಈ ಹಂತದಲ್ಲಿ ಚೀನಾ ಪಾಕಿಸ್ತಾನಕ್ಕೆ ನೆರವಾಗುವ ಮೂಲಕ ಅನಗತ್ಯವಾದುದನ್ನು ಮೈಮೇಲೆ ಎಳೆದುಕೊಳ್ಳಲು ಬಯಸುತ್ತದೆಯೇ ಎಂಬುದು ಬಹಳ ಮುಖ್ಯ ಪ್ರಶ್ನೆ.
ಚೀನಾದ ಎದುರು ಈಗ ರಾಜತಾಂತ್ರಿಕವಾಗಿ ಬುದ್ಧಿವಂತಿಕೆಯ ಮಾರ್ಗವೊಂದಿದೆ.
ಅದೆಂದರೆ, ತಾನು ಹಣ ಹಾಕಿರುವ ಯೋಜನೆಗಳಿಗೆ ಯುದ್ಧದಲ್ಲಿ ಯಾವುದೇ ಹಾನಿ ಸಂಭವಿಸುವುದಿಲ್ಲ ಎಂಬ ಅನೌಪಚಾರಿಕ ಭರವಸೆಯನ್ನು ಭಾರತದಿಂದ ಪಡೆಯುವುದು ಮತ್ತು ಪಾಕಿಸ್ತಾನವನ್ನು ಬೆಂಬಲಿಸುವ ವಿಚಾರದಿಂದ ದೂರ ಉಳಿಯುವುದು.
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಇಂಥ ಹೊತ್ತಲ್ಲಿ ಚೀನಾದ ನಡೆಯ ಮೇಲೆ ಎಲ್ಲರ ಕಣ್ಣು ಇದ್ದೇ ಇದೆ.
ಅದು ತನ್ನ ಮಿತ್ರರಾಷ್ಟ್ರ ಪಾಕಿಸ್ತಾನವನ್ನು ಬೆಂಬಲಿಸುತ್ತದೆಯೇ ಅಥವಾ ಜಾಗತಿಕವಾಗಿ ಖಂಡನೆಗೆ ಒಳಗಾದ ಭಯೋತ್ಪಾದಕ ಕೃತ್ಯದ ವಿರುದ್ಧ ಭಾರತದ ಸಾರ್ವಭೌಮ ಪ್ರತೀಕಾರವನ್ನು ಗೌರವಿಸುತ್ತದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ.
ಮೇ 8ರಂದು ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಯಶಸ್ವಿಯಾಗಿ ವಿಫಲಗೊಳಿಸಿದ ನಂತರದ ಬೆಳವಣಿಗೆಗಳನ್ನು ಗಮನಿಸುವುದು ಅಗತ್ಯ.
ಈ ಹಂತದಲ್ಲಿ ಈ ನೆರೆಹೊರೆಯ ರಾಷ್ಟ್ರಗಳ ನಡುವೆ ಹೇಗೆ ವಿದ್ಯಮಾನಗಳು ತಲೆದೋರಲಿವೆ ಎಂಬುದು ಒಟ್ಟಾರೆ ಸಂಬಂಧದ ಹಿನ್ನೆಲೆಯಲ್ಲೂ ಕುತೂಹಲಕಾರಿ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗವಾಗಿರುವುದರಿಂದ ಅಲ್ಲಿ ಹೊಸ ಯೋಜನೆಗಳನ್ನು ಕೈಗೊಳ್ಳದಂತೆ ಭಾರತ ವಿನಂತಿಸುತ್ತಲೇ ಇದೆ. ಮತ್ತದನ್ನು ಚೀನಾ ವರ್ಷಗಳಿಂದಲೂ ನಿರ್ಲಕ್ಷಿಸುತ್ತಲೇ ಬಂದಿದೆ.
ಚೀನಾ ಈ ಪ್ರದೇಶವನ್ನು 60 ಬಿಲಿಯನ್ ಡಾಲರ್ ಮೌಲ್ಯದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅಂದ್ರೆ (ಸಿಪಿಇಸಿ) ಯೋಜನೆಯಲ್ಲಿ ಸೇರಿಸಿದೆ. ಈ ಪ್ರದೇಶದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದೆ.
ಚೀನಾದ ಗಡಿಯಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್, ಪಾಕಿಸ್ತಾನವನ್ನು ಸಂಪೂರ್ಣವಾಗಿ ದಾಟಿ 2,400 ಕಿ.ಮೀ. ಉದ್ದದ ಸಿಪಿಇಸಿಗೆ ಹೆಬ್ಬಾಗಿಲಾಗುತ್ತದೆ.
ಚೀನಾದಿಂದ ಬರುವ ಕಾರಕೋರಂ ಹೆದ್ದಾರಿಯನ್ನು (ಕೆಕೆಎಚ್) ಮೇಲ್ದರ್ಜೆಗೇರಿಸುವುದು ಮತ್ತು ವಿಸ್ತರಿಸುವುದು ಭೌಗೋಳಿಕ ಅಗತ್ಯವಾಗಿತ್ತು. ಆದರೆ ಭಾರತದ ಕೋರಿಕೆಯನ್ನು ಗಮನಿಸಿ ಚೀನಾ ಇತರ ಯೋಜನೆಗಳನ್ನು ಕೈಗೊಳ್ಳುವುದನ್ನು ತಪ್ಪಿಸಬಹುದಿತ್ತು. ಚೀನಾದ ಆಟ ಇಲ್ಲಿಗೇ ನಿಲ್ಲಲಿಲ್ಲ.
ಎಪ್ರಿಲ್ 22ರ ಪಹಲ್ಗಾಮ್ ದಾಳಿಗೆ ಭಾರತ ಪ್ರತಿದಾಳಿ ನಡೆಸುವ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಚೀನಾ ಪಾಕಿಸ್ತಾನಕ್ಕೆ ಜೆ-10ಸಿ ಫೈಟರ್ ಜೆಟ್ಗಳನ್ನಲ್ಲದೆ ಹೊಸ ಮಿಲಿಟರಿ ಹಾರ್ಡ್ವೇರ್ ಸರಬರಾಜು ಮಾಡಿತು.
ಇಲ್ಲೊಂದು ಗಮನಿಸಬೇಕಾದ ಸಂಗತಿಯೆಂದರೆ, ಪಾಕಿಸ್ತಾನ ದೊಡ್ಡ ಮಟ್ಟದಲ್ಲಿ ಚೀನಾದ ಋಣದಲ್ಲಿ ಬಿದ್ದಿದೆ. ಪಾಕಿಸ್ತಾನ ವರ್ಷಗಳಿಂದ ಚೀನಾದ ಪೂರೈಕೆಗಳಿಗೆ ಪ್ರತಿಯಾಗಿ ಹಣ ಪಾವತಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ, ಕ್ಷಿಪಣಿಗಳು ಮತ್ತು ಮದ್ದುಗುಂಡುಗಳ ನಿರಂತರ ಪೂರೈಕೆಯ ಭರವಸೆ ಅದಕ್ಕೆ ಸಿಕ್ಕಿಲ್ಲ.
ಪಾಕಿಸ್ತಾನ ವಿವಿಧ ವಿದೇಶಿ ಮೂಲಗಳಿಂದ ಹೆಚ್ಚುವರಿ ಸಾಲ ಪಡೆಯಲು ಒದ್ದಾಡುತ್ತಲೇ ಇದೆ. ಏಕೆಂದರೆ ಅದಕ್ಕೆ ಔಷಧಗಳು ಸೇರಿದಂತೆ ವಿವಿಧ ಸರಕುಗಳ ದೊಡ್ಡ ಕೊರತೆ ಉಂಟಾಗಿದೆ.
ಚೀನಾ ಇವಾವುದನ್ನೂ ಸಾಲದ ಮೇಲೆ ಕೊಡುತ್ತಿಲ್ಲ. ಹಿಂದಿನ ಸಾಲಗಳನ್ನು ಮರುಪಾವತಿಸಲು ಪಾಕಿಸ್ತಾನ ವಿಫಲವಾದ ಬಗ್ಗೆ ಬೀಜಿಂಗ್ ಈಗಾಗಲೇ ಅಸಮಾಧಾನ ಹೊಂದಿದೆ. ಹಾಗಾಗಿ ಅದು ತನ್ನ ಮಿತ್ರರಾಷ್ಟ್ರಕ್ಕೆ ಹೆಚ್ಚುವರಿ ಸಾಲ ನೀಡುವ ಸಾಧ್ಯತೆಯಿಲ್ಲ ಎಂದೇ ಹೇಳಲಾಗುತ್ತಿದೆ.
ಹಿಂದಿನ 6 ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿಸು ವಂತೆ ಚೀನಾ ಪಾಕಿಸ್ತಾನವನ್ನು ಒತ್ತಾಯಿಸುತ್ತಲೇ ಇದೆ.
ಪಿಒಕೆಯಲ್ಲಿ ಚೀನಾ ನೆರವಿನಡಿಯಲ್ಲಿನ ಅತಿದೊಡ್ಡ ಯೋಜನೆ ಝೆಲಂ ನದಿಯ ಜಲವಿದ್ಯುತ್ ಸ್ಥಾವರ.
1.54 ಬಿಲಿಯನ್ ಡಾಲರ್ ಮೌಲ್ಯದ ಆಝಾದ್ ಪಟ್ಟನ್ ಜಲವಿದ್ಯುತ್ ಸ್ಥಾವರ ಇದಾಗಿದೆ.
ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿನ ಡೈಮರ್-ಭಾಷಾ ಅಣೆಕಟ್ಟು ಮತ್ತು ಕಾರಕೋರಂ ಹೆದ್ದಾರಿ ನವೀಕರಣ ಇತರ ಪ್ರಮುಖ ಯೋಜನೆಗಳಾಗಿವೆ.
ಭಾರತದ ಮಿಲಿಟರಿ ಸಾಮರ್ಥ್ಯ ನಿಜಕ್ಕೂ ಶ್ರೇಷ್ಠವಾಗಿರುವುದರಿಂದ ಪಾಕಿಸ್ತಾನದ ವಿರುದ್ಧ ಹೋರಾಡುವುದು ಭಾರತಕ್ಕೆ ದೊಡ್ಡ ಸವಾಲೇನೂ ಅಲ್ಲ.
ಆದರೂ, ಈ ಸಮಯದಲ್ಲಿ ಚೀನಾ ಪಾಕಿಸ್ತಾನ ಪಡೆಗಳಿಗೆ ಕ್ಷಿಪಣಿಗಳು ಮತ್ತು ಇತರ ಅತ್ಯಾಧುನಿಕ ಉಪಕರಣಗಳ ತುರ್ತು ಪೂರೈಕೆಗೆ ಮುಂದಾದರೆ ಪರಿಸ್ಥಿತಿ ಸಂಕೀರ್ಣಗೊಳ್ಳಬಹುದು ಎಂಬುದು ಪರಿಣಿತರ ಅಭಿಪ್ರಾಯ.
ಪಾಕಿಸ್ತಾನವು ಎಫ್-16 ಯುದ್ಧವಿಮಾನಗಳ ಪಡೆಯನ್ನು ಹೊಂದಿದ್ದರೂ, ಅದನ್ನು ಭಯೋತ್ಪಾದನಾ ವಿರೋಧಿ ಚಟುವಟಿಕೆಗಳಿಗೆ ಮಾತ್ರ ಬಳಸಬೇಕಿದೆ.
ಆ ಸಂಬಂಧ ಅದು ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಹಾಗಾಗಿ ಅದನ್ನು ಭಾರತದ ವಿರುದ್ಧ ಬಳಸಲು ಸಾಧ್ಯವಿಲ್ಲ.
ಆದರೆ, ತಾನೇ ಮುಳುಗುವಂಥ ಬಿಕ್ಕಟ್ಟು ಎದುರಾದಾಗ ಪಾಕಿಸ್ತಾನ ಅಂಥ ಒಪ್ಪಂದಕ್ಕೆ ಬದ್ಧವಾಗಿರುವುದು ಕೂಡ ಅನುಮಾನ. ಅದು ಯಾವ ಹೊತ್ತಿನಲ್ಲಿ ಹೇಗೆ ತಿರುಗಬಹುದು ಎಂದು ಹೇಳಲು ಸಾಧ್ಯವಿಲ್ಲ.
ಪಾಕಿಸ್ತಾನದ ಶಸ್ತ್ರಾಸ್ತ್ರ ಆಮದುಗಳಲ್ಲಿ ಸುಮಾರು ಶೇ. 81ರಷ್ಟು ಚೀನಾದಿಂದಲೇ ಬರುತ್ತವೆ.
ಚೀನಾ ಪಾಕಿಸ್ತಾನಕ್ಕೆ ಯುದ್ಧನೌಕೆಗಳು, ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಒದಗಿಸಿದೆ.
ಪಾಕಿಸ್ತಾನ ಚೀನಾದಿಂದ ಮಧ್ಯಮ ಶ್ರೇಣಿಯಿಂದ ದೀರ್ಘ ಶ್ರೇಣಿಯ ಕ್ಷಿಪಣಿಗಳ ಹೆಚ್ಚುವರಿ ಪೂರೈಕೆಗಾಗಿ ಕೇಳುತ್ತಿದೆ. ಹೆಚ್ಚುವರಿ ಸಣ್ಣ ಶಸ್ತ್ರಾಸ್ತ್ರಗಳ ಅಗತ್ಯವೂ ಅದಕ್ಕಿದೆ ಎನ್ನಲಾಗುತ್ತದೆ.
ಕೆಲವು ತಜ್ಞರು ಹೇಳುವ ಪ್ರಕಾರ, ಭಾರತ ಪಾಕ್ ನಡುವಿನ ಸಂಘರ್ಷ ನಿಯಂತ್ರಣ ರೇಖೆಯ (ಎಲ್ಒಸಿ) ಎರಡೂ ಬದಿಗಳಲ್ಲಿ ಗುಂಡಿನ ವಿನಿಮಯಕ್ಕೆ ಸೀಮಿತವಾಗಿರುವ ಸಾಧ್ಯತೆಯಿದೆ. ಇಡೀ ಸೈನ್ಯ, ವಾಯುಪಡೆ ಮತ್ತು ನೌಕಾಪಡೆಯನ್ನು ಒಳಗೊಂಡ ಸಂಪೂರ್ಣ ಯುದ್ಧ ನಡೆಯಲಾರದು ಎಂಬುದು ಅವರ ಊಹೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಎಲ್ಒಸಿ ಉದ್ದಕ್ಕೂ ಪಾಕಿಸ್ತಾನ ಹಲವಾರು ಬಾರಿ ಕದನ ವಿರಾಮ ಉಲ್ಲಂಘನೆಗಳನ್ನು ನಡೆಸಿದೆ ಎಂದು ಭಾರತೀಯ ಸೇನೆ ಎಪ್ರಿಲ್ 28 ರಂದು ಹೇಳಿತ್ತು. ನಿನ್ನೆ, ಮೊನ್ನೆಯೂ ಅದನ್ನು ಹೇಳಿದೆ.
ದಶಕಗಳಿಂದಲೂ ಗಡಿಯಾಚೆಗಿನ ಭಯೋತ್ಪಾದನೆಯ ಮೂಲಕ ಭಾರತವನ್ನು ಒತ್ತಡದಲ್ಲಿಡುವ ಚೀನಾದ ಅಗತ್ಯವನ್ನು ಕೂಡ ಪಾಕಿಸ್ತಾನ ಸರಿಯಾಗಿಯೇ ಬಳಸಿಕೊಳ್ಳುತ್ತಿದೆ.
ಚೀನಾಕ್ಕೆ ಇರುವ ಈ ಅಗತ್ಯವನ್ನು ಬಳಸಿಕೊಂಡು ಅದನ್ನು ಪಾಕಿಸ್ತಾನ ಬ್ಲ್ಯಾಕ್ಮೇಲ್ ಮಾಡುತ್ತಲೇ ಇದೆ.
10 ಬಿಲಿಯನ್ ಡಾಲರ್ನಷ್ಟು ತೀರಾ ಅಲ್ಪ ವಿದೇಶಿ ವಿನಿಮಯ ಮೀಸಲು ಹೊಂದಿರುವ ದೇಶ ಪಾಕಿಸ್ತಾನ.
ಭಾರತದ್ದು 640 ಬಿಲಿಯನ್ ಡಾಲರ್.
ಇಂಥ ನಿಕೃಷ್ಟ ಸ್ಥಿತಿಯಲ್ಲಿರುವ ಪಾಕಿಸ್ತಾನ ತನಗೆ ಬೇಕಿರುವ ಹೆಚ್ಚುವರಿ ಶಸ್ತ್ರಾಸ್ತ್ರಗಳಿಗೆ ಹಣ ಪಾವತಿಸುವ ಸ್ಥಿತಿಯಲ್ಲಿಲ್ಲ.
ಇದಲ್ಲದೆ, ಪಾಕಿಸ್ತಾನ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಸಂಬಂಧದ ತನ್ನ ಸಾಲವನ್ನು ಮರುಪಾವತಿಸಲು ಕೂಡ ವಿಫಲವಾಗಿದೆ.
ಇದರಿಂದಾಗಿ ಚೀನಾ 6 ಬಿಲಿಯನ್ ಡಾಲರ್ ಮೊತ್ತದ ಕಂತುಗಳನ್ನು ಮರು ಪಾವತಿಸುವಂತೆ ಕಳೆದ ತಿಂಗಳು ಒತ್ತಾಯಿಸಿತ್ತು. ಪಾಕಿಸ್ತಾನ ಈಗ ಹೆಚ್ಚುಕಡಿಮೆ ದಿವಾಳಿ ಸ್ಥಿತಿಯಲ್ಲಿದೆ.
ಚೀನಾ ಇತ್ತೀಚೆಗೆ ಸೌದಿ ಅರೇಬಿಯಾ ಮತ್ತು ಯುಎಇ ಜೊತೆ ಸೇರಿ ಪಾಕಿಸ್ತಾನಕ್ಕೆ 5 ಬಿಲಿಯನ್ ಡಾಲರ್ ಸಾಲ ನೀಡಿದೆ.
ಇದರ ಹೊರತಾಗಿ ಪಾಕಿಸ್ತಾನ ಹೆಚ್ಚುವರಿ 1.4 ಬಿಲಿಯನ್ ಡಾಲರ್ ಸಾಲಕ್ಕಾಗಿ ಚೀನಾ ಎದುರು ಬೇಡಿಕೆ ಇಟ್ಟಿದೆ.
ಭಾರತದೊಂದಿಗಿನ ಸಂಘರ್ಷ ಸ್ಥಿತಿ ತೀವ್ರಗೊಂಡರೆ ಪಾಕಿಸ್ತಾನದ ಆರ್ಥಿಕ ಅನಿವಾರ್ಯತೆ ಇನ್ನಷ್ಟು ಹೆಚ್ಚುತ್ತದೆ. ಆಗ ಅದು ಚೀನಾ ಮತ್ತು ಅದರ ಅರಬ್ ಪಾಲುದಾರರಿಂದ ಹೆಚ್ಚಿನ ಸಾಲವನ್ನು ಕೇಳುವ ಸ್ಥಿತಿ ಉಂಟಾಗಬಹುದು.
ಭಾರತ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸುವುದಾಗಿ ಘೋಷಿಸಿದ ನಂತರ ಮತ್ತೊಂದು ಬೆಳವಣಿಗೆಯಾಗಿರುವುದನ್ನು ಗಮನಿಸಬೇಕು.
ಭಾರತದ ಘೋಷಣೆ ಬೆನ್ನಲ್ಲೇ, ಹಲವಾರು ಪಾಕಿಸ್ತಾನಿ ತಜ್ಞರು, ಟಿಬೆಟ್ನಿಂದ ಹರಿಯುವ ಬ್ರಹ್ಮಪುತ್ರ ನದಿಯ
ನೀರಿನ ಹರಿವನ್ನು ತಡೆಯುವ ಮೂಲಕ ಭಾರತಕ್ಕೆ ಚೀನಾ ಪಾಠ ಕಲಿಸಬೇಕಿದೆ ಎಂದಿದ್ದಾರೆ.
ಚೀನಾ ನೀರಿನ ಹರಿವನ್ನು ತಡೆಯುವ ಸಾಮರ್ಥ್ಯ ಹೊಂದಿದೆಯೇ ಮತ್ತು ಪಾಕಿಸ್ತಾನದ ಕೋರಿಕೆಯನ್ನು ಅದು ಒಪ್ಪುತ್ತದೆಯೇ ಎಂಬುದು ಪ್ರಶ್ನೆ.
ಚೀನಾ ಯಾರ್ಲುಂಗ್ ಜಾಂಗ್ಬೊದಲ್ಲಿ ದೊಡ್ಡ ಜಲವಿದ್ಯುತ್ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಘೋಷಿಸಿದೆ.
ಆದರೆ ಯೋಜನೆ ಪೂರ್ಣಗೊಳ್ಳಲು 4-5 ವರ್ಷಗಳು ಬೇಕಾಗುತ್ತದೆ.
ಅದು ಪೂರ್ಣಗೊಂಡ ನಂತರವೂ, ಚೀನಾ ತನ್ನದೇ ಆದ ಕೆಲವು ಪ್ರದೇಶಗಳಿಗೆ ನೀರು ನುಗ್ಗದಂತೆ ಬೃಹತ್ ನದಿಯ ಮೇಲೆ ತಡೆಯನ್ನು ನಿರ್ಮಿಸುವುದು ಕಷ್ಟಕರವಾಗಬಹುದು.
ಈಗ, ಚೀನಾದಿಂದ ಹೆಚ್ಚುವರಿ ಶಸ್ತ್ರಾಸ್ತ್ರಗಳು ಮತ್ತು ಸಾಲ ಸಿಗದೇ ಹೋದರೆ ಪಾಕಿಸ್ತಾನ ಭಾರತವನ್ನು ಯುದ್ಧದಲ್ಲಿ ಎದುರಿಸುವುದು ಸಾಧ್ಯವೇ ಇಲ್ಲ.
ಇದು ಭಾರತಕ್ಕೂ ಗೊತ್ತು, ಚೀನಾಕ್ಕೂ ತಿಳಿದಿದೆ.
ಹೀಗಿರುವಾಗ, ಈ ಹಂತದಲ್ಲಿ ಚೀನಾ ಪಾಕಿಸ್ತಾನಕ್ಕೆ ನೆರವಾಗುವ ಮೂಲಕ ಅನಗತ್ಯವಾದುದನ್ನು ಮೈಮೇಲೆ ಎಳೆದುಕೊಳ್ಳಲು ಬಯಸುತ್ತದೆಯೇ ಎಂಬುದು ಬಹಳ ಮುಖ್ಯ ಪ್ರಶ್ನೆ.
ಚೀನಾದ ಎದುರು ಈಗ ರಾಜತಾಂತ್ರಿಕವಾಗಿ ಬುದ್ಧಿವಂತಿಕೆಯ ಮಾರ್ಗವೊಂದಿದೆ.
ಅದೆಂದರೆ, ತಾನು ಹಣ ಹಾಕಿರುವ ಯೋಜನೆಗಳಿಗೆ ಯುದ್ಧದಲ್ಲಿ ಯಾವುದೇ ಹಾನಿ ಸಂಭವಿಸುವುದಿಲ್ಲ ಎಂಬ ಅನೌಪಚಾರಿಕ ಭರವಸೆಯನ್ನು ಭಾರತದಿಂದ ಪಡೆಯುವುದು ಮತ್ತು ಪಾಕಿಸ್ತಾನವನ್ನು ಬೆಂಬಲಿಸುವ ವಿಚಾರದಿಂದ ದೂರ ಉಳಿಯುವುದು.
ಭಾರತ ಚೀನಾಕ್ಕೆ 113 ಬಿಲಿಯನ್ ಡಾಲರ್ ರಫ್ತು ಮಾರುಕಟ್ಟೆ ದೇಶವಾಗಿದೆ. ಅಂದರೆ, ಪಾಕಿಸ್ತಾನಕ್ಕಿಂತಲೂ ಭಾರತವೇ ಚೀನಾಕ್ಕೆ ಆರ್ಥಿಕವಾಗಿ ಹೆಚ್ಚು ಪ್ರಮುಖ ದೇಶವಾಗಿದೆ.
ಇನ್ನೊಂದೆಡೆ, ಅಮೆರಿಕಕ್ಕೆ ಚೀನಾದ 440 ಬಿಲಿಯನ್ ಡಾಲರ್ ಮೌಲ್ಯದ ರಫ್ತುಗಳು ಶೇ. 20-25ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಅಮೆರಿಕ ಅಧ್ಯಕ್ಷ ಟ್ರಂಪ್ ಸುಂಕ ದರಗಳನ್ನು ಸ್ವಲ್ಪ ಕಡಿಮೆ ಮಾಡಿದರೂ ಚೀನಾಕ್ಕೆ ಆಗುವ ಈ ನಷ್ಟ ತಪ್ಪುವುದಿಲ್ಲ.
ಕೆಲವು ಪಾಕಿಸ್ತಾನಿ ನಾಯಕರು ಪರಮಾಣು ಅಸ್ತ್ರ ಬಳಸುವ ಬಗ್ಗೆ ಹೊಣೆಗೇಡಿ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.
ಪರಮಾಣು ಯುದ್ಧ ಅಂದುಕೊಂಡಷ್ಟು ಸುಲಭವಲ್ಲ.
ಅದು ಒಮ್ಮೆಲೆ ಹಲವಾರು ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಅದೇ ಕಾರಣಕ್ಕೆ ಪರಮಾಣು ಅಸ್ತ್ರ ಬಳಕೆಯನ್ನು ಚೀನಾ ಬೆಂಬಲಿಸುವುದಿಲ್ಲ.
ಒಂದು ವೇಳೆ ಪಾಕಿಸ್ತಾನ ಹಾಗೆ ಮಾಡಿದ್ದೇ ಆದಲ್ಲಿ ಅದರದೇ ಆರ್ಥಿಕ ಅಭಿವೃದ್ಧಿ ಸಂಪೂರ್ಣವಾಗಿ ಪತನವಾಗಲಿದೆ.
ಹಾಗೆಯೇ ತೈವಾನ್ ಅನ್ನು ವಶಪಡಿಸಿಕೊಳ್ಳುವುದರ ಕಡೆ ಕಣ್ಣಿಟ್ಟಿರುವ ಚೀನಾ ಯೋಜನೆಗಳ ಮೇಲೆಯೂ ಅದು ಗಂಭೀರ ಪರಿಣಾಮ ಬೀರಲಿದೆ.
ಭಾರತ ಈಗಾಗಲೇ ಚೀನಾದ ಹೂಡಿಕೆಗಳಿಗೆ ಹೆಚ್ಚು ವ್ಯಾಪಕ ಅವಕಾಶಗಳನ್ನು ತೆರೆಯಲು ಸಿದ್ಧವಾಗಿದೆ.
ಪಾಕಿಸ್ತಾನವನ್ನು ಚೀನಾ ಬೆಂಬಲಿಸದೇ ಉಳಿದರೆ ಭಾರತದ ಕಡೆಯಿಂದ ಅದಕ್ಕೆ ಇನ್ನಷ್ಟು ಲಾಭವಾಗಲಿದೆ ಎಂಬುದೂ ನಿಜ.
ಈ ಹೊತ್ತಿನಲ್ಲಿ ಚೀನಾ ಏನು ನಿರ್ಧಾರ ಕೈಗೊಳ್ಳಬಹುದು?
ಅದು ತೆಗೆದುಕೊಳ್ಳುವ ನಿರ್ಧಾರವೇ ಅದರ ಬುದ್ಧಿವಂತಿಕೆಯ ಮಟ್ಟವನ್ನು ಸೂಚಿಸಲಿದೆ ಎಂಬುದಂತೂ ಸತ್ಯ.