ನನಗೆ ಮಾಡಲು ಇನ್ನೂ ಉತ್ತಮ ಕೆಲಸಗಳಿವೆ: ಕಾಂಗ್ರೆಸ್ ಆರೋಪಕ್ಕೆ ಶಶಿ ತರೂರ್ ತಿರುಗೇಟು

ಕಾಂಗ್ರೆಸ್ ಸಂಸದ ಶಶಿ ತರೂರ್ | Photo: ANI
ಹೊಸದಿಲ್ಲಿ: "ನನ್ನ ದೃಷ್ಟಿಕೋನವನ್ನು ವಿರೂಪಗೊಳಿಸುವ ಟೀಕಾಕಾರರು ಹಾಗೂ ಟ್ರೋಲರ್ಗಳಿಗೆ ಸ್ವಾಗತವಿದ್ದು, ನನಗೆ ಮಾಡಲು ಇನ್ನೂ ಉತ್ತಮ ಕೆಲಸಗಳಿವೆ" ಎಂದು, "ಶಶಿ ತರೂರ್ ಬಿಜೆಪಿ ಪಕ್ಷದ ಸೂಪರ್ ವಕ್ತಾರರಾಗಿದ್ದಾರೆ" ಕಾಂಗ್ರೆಸ್ ಪಕ್ಷವು ನಿನ್ನೆ ಮಾಡಿದ್ದ ವ್ಯಂಗ್ಯಕ್ಕೆ ಸಂಸದ ಶಶಿ ತರೂರ್ ತಿರುಗೇಟು ನೀಡಿದ್ದಾರೆ.
ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಯೋತ್ಪಾದನೆ ಕುರಿತು ಜಗತ್ತಿಗೆ ಮನವರಿಕೆ ಮಾಡಿಕೊಡುವ ಕೇಂದ್ರ ಸರಕಾರದ ಪ್ರಯತ್ನದ ಭಾಗವಾಗಿ ವಿದೇಶಗಳಿಗೆ ತೆರಳಿರುವ ಭಾರತೀಯ ನಿಯೋಗವನ್ನು ಶಶಿ ತರೂರ್ ಮುನ್ನಡೆಸುತ್ತಿದ್ದಾರೆ. ಅಮೆರಿಕ ಮತ್ತು ಪನಾಮಾದಲ್ಲಿನ ಕಾರ್ಯಕ್ರಮಗಳ ನಂತರ, ಇದೀಗ ಭಾರತೀಯ ನಿಯೋಗವು ಬೊಗೊಟಾದತ್ತ ಪ್ರಯಾಣ ಬೆಳೆಸಿದೆ.
ಈ ನಡುವೆ ಕಾಂಗ್ರೆಸ್ ಟೀಕೆಯ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, "ಪನಾಮದಲ್ಲಿನ ಸುದೀರ್ಘ ಹಾಗೂ ಯಶಸ್ವಿ ದಿನದ ನಂತರ, ನಾನು ಮಧ್ಯರಾತ್ರಿಯಲ್ಲಿ ನನ್ನ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ್ದು, ಇನ್ನು ಆರು ಗಂಟೆಗಳಲ್ಲಿ ಬೊಗೊಟಾ, ಕೊಲಂಬಿಯಾಗೆ ತೆರಳಬೇಕಿದೆ. ಹೀಗಾಗಿ, ನನಗೆ ಇದಕ್ಕೆಲ್ಲ ಯಾವುದೇ ಸಮಯವಿಲ್ಲ. ಆದರೆ, ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಯೋಧರು ತೋರಿರುವ ಪರಾಕ್ರಮದ ಬಗ್ಗೆ ನಾನು ತೋರಿರಬಹುದಾದ ನಿರ್ಲಕ್ಷ್ಯದ ಕುರಿತು ಅಸೂಯೆಯಿಂದ ಕುದಿಯುತ್ತಿರುವರಿಗೆ, "ನಾನು ಸ್ಪಷ್ಟವಾಗಿ ಹಾಗೂ ನಿರ್ದಿಷ್ಟವಾಗಿ ಭಯೋತ್ಪಾದಕ ದಾಳಿಗಳ ವಿರುದ್ಧ ಪ್ರತೀಕಾರದ ಕುರಿತು ಮಾತ್ರ ಮಾತನಾಡುತ್ತಿದ್ದೇನೆಯೇ ಹೊರತು, ಹಿಂದಿನ ಯುದ್ಧಗಳ ಕುರಿತಂತಲ್ಲ. ಇತ್ತೀಚಿನ ವರ್ಷಗಳೊಂದರಲ್ಲೇ ನಡೆದಿರುವ ಹಲವಾರು ಭಯೋತ್ಪಾದಕ ದಾಳಿಗಳ ಉಲ್ಲೇಖಗಳನ್ನು ಆಧರಿಸಿ ನನ್ನ ಹೇಳಿಕೆಗಳಿದ್ದು, ಈ ಹಿಂದೆ ಭಾರತದ ಪ್ರತಿಕ್ರಿಯೆಯನ್ನು ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿ ಬಗೆಗಿನ ನಮ್ಮ ಜವಾಬ್ದಾರಿಯುತ ಗೌರವಕ್ಕೆ ಮಾತ್ರ ನಿರ್ಬಂಧಿಸಲಾಗಿತ್ತು ಹಾಗೂ ಸೀಮಿತಗೊಳಿಸಲಾಗಿತ್ತು" ಎಂದು ತಿಳಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
"ಆದರೆ, ನನ್ನ ದೃಷ್ಟಿಕೋನ ಹಾಗೂ ಮಾತುಗಳನ್ನು ತಮಗೆ ಬೇಕಾದಂತೆ ವಿರೂಪಗೊಳಿಸಲು ಎಂದಿನಿಂತೆ ಟೀಕಾಕಾರರಿಗೆ ಹಾಗೂ ಟ್ರೋಲರ್ಗಳಿಗೆ ಸ್ವಾಗತ. ಅದರೆ, ನಿಜವಾಗಿಯೂ ನನಗೆ ಮಾಡಲು ಇನ್ನೂ ಉತ್ತಮ ಕೆಲಸಗಳಿವೆ" ಎಂದು ಹೇಳಿ, ಅವರು ತಮ್ಮ ಪೋಸ್ಟ್ ಅನ್ನು ಅಂತ್ಯಗೊಳಿಸಿದ್ದಾರೆ.