ಮತ್ತೆ ತವರಿಗೆ ಮರಳಿದ ʼಬಾಂಗ್ಲಾದೇಶಿʼ ಎಂದು ಗಡೀಪಾರಾಗಿದ್ದ ಅಸ್ಸಾಂನ ನಿವೃತ್ತ ಶಿಕ್ಷಕ

ಸಾಂದರ್ಭಿಕ ಚಿತ್ರ | PC : freepik.com
ಮೊರಿಗಾಂವ್(ಅಸ್ಸಾಂ): ವಿದೇಶಿ ಪ್ರಜೆ ಎಂದು ಅಸ್ಸಾಂ ಪೊಲೀಸರಿಂದ ವಶಕ್ಕೊಳಗಾಗಿ, ಬಾಂಗ್ಲಾದೇಶಕ್ಕೆ ಗಡೀಪಾರಾಗಿದ್ದ ನಿವೃತ್ತ ಶಿಕ್ಷಕರೊಬ್ಬರು ಶನಿವಾರ ಮೊರಿಗಾಂವ್ ಜಿಲ್ಲೆಯ ತಮ್ಮ ಸ್ವಗ್ರಾಮಕ್ಕೆ ಮರಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 24ರಂದು ಮೊರಿಗಾಂವ್ ಜಿಲ್ಲೆಯ ವಿವಿಧ ಭಾಗಗಳಿಂದ ಖೈರುಲ್ ಇಸ್ಲಾಂ ಹಾಗೂ ಇನ್ನೂ ಎಂಟು ಮಂದಿಯನ್ನು ಪೊಲೀಸರು ಕರೆದೊಯ್ದಿದ್ದರು. ಆದರೆ, ಅವರು ಎಲ್ಲಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದರು.
ಈ ಪೈಕಿ ಪೊಲೀಸರು ವಶಕ್ಕೆ ಪಡೆದಿದ್ದ ಖೈರುಲ್ ಇಸ್ಲಾಂರನ್ನು ಬಾಂಗ್ಲಾದೇಶಕ್ಕೆ ಕರೆದೊಯ್ಯುತ್ತಿರುವುದೆನ್ನಲಾದ ವಿಡಿಯೊವೊಂದನ್ನು ನಾವು ನೋಡಿದ್ದು, ಅವರನ್ನು ದಕ್ಷಿಣ ಸಲ್ಮಾರಾ ಮಂಕಚಾರ್ ಜಿಲ್ಲೆಯ ಭಾರತ-ಬಾಂಗ್ಲಾದೇಶದ ಗಡಿಯ ಬಳಿ ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದರು.
ಆದರೆ, ಶನಿವಾರ ಬೆಳಗ್ಗೆ ಖೈರುಲ್ ಇಸ್ಲಾಂರನ್ನು ಪೊಲೀಸರು ಮನೆಗೆ ಕರೆ ತಂದು ಬಿಟ್ಟಿದ್ದಾರೆ ಎಂದು ಇದೀಗ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಖೈರುಲ್ ಇಸ್ಲಾಂರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿತ್ತು ಹಾಗೂ ಅವರು ದೈಹಿಕವಾಗಿ ಸಮರ್ಥರಾಗಿದ್ದರು ಎಂದು ಅಸ್ಸಾಂ ಗಡಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಅವರನ್ನು ಎಲ್ಲಿಂದ ವಶಕ್ಕೆ ಪಡೆಯಲಾಗಿತ್ತು ಎಂಬ ಸಂಗತಿಯನ್ನು ಬಹಿರಂಗ ಪಡಿಸಲು ಅವರು ನಿರಾಕರಿಸಿದ್ದಾರೆ.
ಖೈರುಲ್ ಇಸ್ಲಾಂರೊಂದಿಗೆ ಕರೆದೊಯ್ಯಲಾಗಿದ್ದ ಇನ್ನಿತರ ಎಂಟು ಮಂದಿಯನ್ನು ಗೋಲ್ಪಾರ ಜಿಲ್ಲೆಯ ಮಟಿಯಾದಲ್ಲಿನ ಬಂಧನ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಬಂಧನ ಕೇಂದ್ರಕ್ಕೆ ಕರೆದೊಯ್ಯಲಾಗಿರುವ ಎಂಟು ಮಂದಿಯ ಮೇಲ್ಮನವಿಯು ಸುಪ್ರೀಂ ಕೋರ್ಟ್ ಅಥವಾ ಗುವಾಹಟಿ ಹೈಕೋರ್ಟ್ ಎದುರು ಬಾಕಿಯಿದೆ ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.
ಈ ನಡುವೆ, ನನ್ನ ಪತಿಯು ನಿವೃತ್ತ ಶಿಕ್ಷಕರಾಗಿದ್ದು, ಕಾನೂನು ಪಾಲಿಸುವ ಪ್ರಜೆಯಾಗಿದ್ದಾರೆ ಎಂದು ಖೈರುಲ್ ಇಸ್ಲಾಂ ಅವರ ಪತ್ನಿ ರೀಟಾ ಖಾನಂ ತಿಳಿಸಿದ್ದಾರೆ.