ಪ್ರವಾಹಪೀಡಿತ ಈಶಾನ್ಯ ರಾಜ್ಯಗಳಿಗೆ ಆರ್ಥಿಕ ನೆರವಿಗಾಗಿ ಕೇಂದ್ರಕ್ಕೆ ಕಾಂಗ್ರೆಸ್ ಒತ್ತಾಯ

ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ: ಈಶಾನ್ಯ ರಾಜ್ಯಗಳಲ್ಲಿಯ ಪ್ರವಾಹ ಸ್ಥಿತಿ ಕುರಿತು ಸೋಮವಾರ ಎಕ್ಸ್ ಪೋಸ್ಟ್ ನಲ್ಲಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯವರು ತನ್ನ ಪಿಎಂ ಕೇರ್ಸ್ ಫಂಡನ್ ಬಾಗಿಲುಗಳನ್ನು ತೆರೆಯುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಫಂಡ್ನಲ್ಲಿ ಲೆಕ್ಕಪರಿಶೋಧನೆಯಿಲ್ಲದೆ ಕೋಟ್ಯಂತರ ರೂ.ಗಳು ಉಳಿದುಕೊಂಡಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಸ್ಸಾಮನ್ನು ಉಲ್ಲೇಖಿಸಿರುವ ಖರ್ಗೆ, ಅದನ್ನು ಪ್ರವಾಹಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಪ್ರಧಾನಿ ಮೋದಿಯವರು 2016ರಲ್ಲಿ ಭರವಸೆ ನೀಡಿದ್ದರು,ಆದರೆ ಡಬಲ್ ಇಂಜಿನ್ ಸರಕಾರಗಳು ರಾಜ್ಯವನ್ನು ವಂಚಿಸಿದಂತೆ ಕಂಡು ಬರುತ್ತಿದೆ ಎಂದು ಕುಟುಕಿದ್ದಾರೆ.
ಈಶಾನ್ಯ ಭಾರತವು ವಿನಾಶಕಾರಿ ಪ್ರವಾಹಗಳು, ಭೂಕುಸಿತಗಳು ಮತ್ತು ಭಾರೀ ಮಳೆಯಿಂದಾಗಿ ತತ್ತರಿಸುತ್ತಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಸಿಕ್ಕಿಂ ಮತ್ತು ಮೇಘಾಲಯ ಅತ್ಯಂತ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯಗಳಾಗಿದ್ದು, ಹಲವಾರು ಜನರು ಜೀವಗಳನ್ನು ಕಳೆದುಕೊಂಡಿದ್ದಾರೆ ಮತ್ತು ಲಕ್ಷಾಂತರ ಜನರು ತೊಂದರೆಯಲ್ಲಿದ್ದಾರೆ ಎಂದು ಹೇಳಿರುವ ಖರ್ಗೆ, ಜನರಿಗೆ ನೆರವನ್ನು ಒದಗಿಸಲು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಎಲ್ಲ ಪ್ರಯತ್ನಗಳನ್ನೂ ಮಾಡಬೇಕು ಎಂದು ಸೂಚಿಸಿದ್ದಾರೆ.