ಉತ್ತರ ಪ್ರದೇಶ | ಲೈಂಗಿಕ ಕೃತ್ಯಕ್ಕೆ ನಿರಾಕರಿಸಿದ್ದರಿಂದ, ತನ್ನ ಪ್ರಿಯಕರನಿಂದಲೇ ಹತ್ಯೆಗೀಡಾದ 65 ವರ್ಷದ ಮಹಿಳೆ

ಸಾಂದರ್ಭಿಕ ಚಿತ್ರ
ಕೌಶಾಂಬಿ (ಉತ್ತರ ಪ್ರದೇಶ): ತನ್ನೊಂದಿಗೆ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ ತನ್ನ ಹಿರಿಯ ವಯಸ್ಸಿನ ಪ್ರೇಯಸಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ಆರೋಪದ ಮೇಲೆ ಮಂಗಳವಾರ 45 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಕೌಶಾಂಬಿ ಜಿಲ್ಲೆಯ ಸರಾಯಿ ಅಕಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬರಾಯಿ ಗ್ರಾಮದ ನಿವಾಸಿ ಸಾವರಿ ದೇವಿ (65) ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮೇ 25ರಂದು ಆಕೆ ತನ್ನ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ವೇಳೆ, ಆಕೆಯ ಕುತ್ತಿಗೆಯನ್ನು ಬಟ್ಟೆಯ ಚೂರೊಂದರಿಂದ ಬಿಗಿಯಲಾಗಿತ್ತು ಹಾಗೂ ಆಕೆಯನ್ನು ವಿವಸ್ತ್ರಗೊಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಈ ಕುರಿತು ಸೂಕ್ತ ತನಿಖೆ ಕೈಗೊಂಡ ನಂತರ, ಮೃತ ಮಹಿಳೆಯ ಗ್ರಾಮದ ನಿವಾಸಿಯೇ ಆದ ದಿನೇಶ್ ಕುಮಾರ್ ಸೇನ್ ಎಂಬ ಆರೋಪಿಯನ್ನು ಮಂಗಳವಾರ ಬಸುಹಾರ್ ತಿರುವಿನ ಬಳಿ ಬಂಧಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್, “ವಿಚಾರಣೆಯ ಸಂದರ್ಭದಲ್ಲಿ ಆರೋಪಿ ದಿನೇಶ್ ಕುಮಾರ್ ಸೇನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮೃತ ಸಾವರಿ ದೇವಿಗೆ ಯಾವುದೇ ಮಕ್ಕಳಿರಲಿಲ್ಲ ಹಾಗೂ ಆಕೆಯನ್ನು ಆಕೆಯ ಪತಿ ವಿವಾಹವಾದ ಕೇವಲ 6-7 ವರ್ಷಗಳಲ್ಲೇ ತೊರೆದಿದ್ದ ಎಂದು ಆತ ಬಹಿರಂಗಪಡಿಸಿದ್ದಾನೆ” ಎಂದು ಹೇಳಿದ್ದಾರೆ.
“ಆಕೆ ತನ್ನ ಮಾವಂದಿರ ಜಮೀನಿನಲ್ಲಿರುವ ಮಣ್ಣಿನ ಮನೆಯೊಂದರಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ದಿನೇಶ್ ಕುಮಾರ್ ಸೇನ್ ಆಕೆಗೆ ಹಾಲು ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದ. ದಿನಗಳೆದಂತೆ, ಅವರಿಬ್ಬರ ನಡುವೆ ಪ್ರಣಯ ಹಾಗೂ ದೈಹಿಕ ಸಂಬಂಧ ಬೆಳೆದಿತ್ತು” ಎಂದೂ ಅವರು ತಿಳಿಸಿದ್ದಾರೆ.
“ವಿಚಾರಣೆಯ ವೇಳೆ, ನಾನು ಹಾಗೂ ಸಾವರಿ ದೇವಿ ರಾತ್ರಿಯ ಹೊತ್ತು ಯಾವಾಗಲೂ ಫೋನ್ ನಲ್ಲಿ ಮಾತನಾಡುತ್ತಿದ್ದೆವು ಹಾಗೂ ಕೆಲವೊಮ್ಮೆ ತಡ ರಾತ್ರಿಯ ವೇಳೆ ನಾನು ಆಕೆಯ ಮನೆಗೆ ಭೇಟಿ ನೀಡುತ್ತಿದ್ದೆ. ಮೇ 23ರಂದು ಆಕೆಯೊಂದಿಗೆ ಫೋನ್ ನಲ್ಲಿ ಮಾತನಾಡಿದ ನಂತರ, ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಆಕೆಯ ಮನೆಗೆ ತೆರಳಿ, ದೈಹಿಕ ಸಂಪರ್ಕಕ್ಕಾಗಿ ಕೋರಿದೆ. ಆದರೆ, ನನ್ನ ಆರೋಗ್ಯ ಹದಗೆಟ್ಟಿದೆ ಎಂದು ಸಾವರಿ ದೇವಿ ನನ್ನ ಕೋರಿಕೆಯನ್ನು ನಿರಾಕರಿಸಿದಳು. ಆಕೆ ನನ್ನೊಂದಿಗೆ ದೈಹಿಕ ಸಂಪರ್ಕ ನಿರಾಕರಿಸಲು ನೆಪ ಹೇಳುತ್ತಿದ್ದಾಳೆ ಎಂದು ಭಾವಿಸಿದ ನಾನು, ಆಕೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಲು ಮುಂದಾದೆ. ಆದರೆ, ಆಕೆ ನನ್ನನ್ನು ಹಿಂದಕ್ಕೆ ದೂಡಿದ್ದರಿಂದ ಆಕ್ರೋಶಗೊಂಡು ನಾನು ಆಕೆಯ ಕುತ್ತಿಗೆಯನ್ನು ಬಟ್ಟೆಯ ತುಂಡೊಂದರಿಂದ ಬಿಗಿದು ಹತ್ಯೆಗೈದೆ ಎಂದು ದಿನೇಶ್ ಕುಮಾರ್ ಸೇನ್ ತಪ್ಪೊಪ್ಪಿಕೊಂಡಿದ್ದಾನೆ” ಎಂದು ಅವರು ಹೇಳಿದ್ದಾರೆ.
ನಂತರ ಬಂಧನಕ್ಕೊಳಗಾಗಬಹುದು ಎಂಬ ಭೀತಿಯಿಂದ ಆಕೆಯ ಮೊಬೈಲ್ ಫೋನ್ ಅನ್ನು ಅಲ್ಲಿಂದ ತೆಗೆದುಕೊಂಡು ಹೋಗಿರುವ ದಿನೇಶ್ ಕುಮಾರ್ ಸೇನ್, ಅದನ್ನು ತನ್ನ ಮನೆಯ ಚರಂಡಿಯೊಂದಕ್ಕೆ ಎಸೆದಿದ್ದಾನೆ. ನಂತರ, ಆತನ ತಪ್ಪೊಪ್ಪಿಗೆಯನ್ನು ಆಧರಿಸಿ, ಸಾವರಿ ದೇವಿಯ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೂರ್ಣಪ್ರಮಾಣದ ಕಾನೂನು ಔಪಚಾರಿಕತೆಯನ್ನು ಪೂರೈಸಿದ ನಂತರ, ಆರೋಪಿ ದಿನೇಶ್ ಕುಮಾರ್ ಸೇನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ನಂತರ, ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.