ಪೆರ್ಲ | ಕಾರು ಢಿಕ್ಕಿ: ರಿಕ್ಷಾ ಚಾಲಕ ಮೃತ್ಯು

ಕಾಸರಗೋಡು: ಕಾರು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಉರುಳಿಬಿದ್ದು ಚಾಲಕ ಮೃತಪಟ್ಟ ಘಟನೆ ಪೆರ್ಲ ಪೇಟೆಯ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ 8:30ರ ಸುಮಾರಿಗೆ ಸಂಭವಿಸಿದೆ.
ಮಣಿಯಂಪಾರೆ ನಿವಾಸಿ, ರಿಕ್ಷಾ ಚಾಲಕ ಶೇಣಿ ಬಾರೆದಳದ ನಾರಾಯಣ ಮೂಲ್ಯ (67) ಮೃತಪಟ್ಟವರು.
ಶೇಣಿ ಶಾಲಾ ಬಳಿ ರಿಕ್ಷಾ ಚಲಾಯಿಸುತ್ತಿದ್ದ ಇವರು ಮಣಿಯಂಪಾರೆ ನಿವಾಸಿಯಾದ ರೋಗಿಯೊಬ್ಬರನ್ನು ಪೆರ್ಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಇವರು ಚಲಾಯಿಸುತ್ತಿದ್ದ ರಿಕ್ಷಾಕ್ಕೆ ಹಿಂದೆಯಿಂದ ಬಂದ ಕಾರೊಂದು ಢಿಕ್ಕಿ ಹೊಡೆದಿದೆ.
ಢಿಕ್ಕಿಯಾದ ರಭಸಕ್ಕೆ ರಿಕ್ಷಾ ಉರುಳಿಬಿದ್ದಿದ್ದು, ಗಂಭೀರ ಗಾಯಗೊಂಡಿದ್ದ ನಾರಾಯಣ ಮೂಲ್ಯ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.
ರಿಕ್ಷಾದಲ್ಲಿದ್ದ ಸಹ ಪ್ರಯಾಣಿಕರಿಗೂ ತೀವ್ರ ಗಾಯಗಳಾಗಿವೆ.
ಶೇಣಿ ಅಯ್ಯಪ್ಪ ಮಂದಿರದ ಸ್ಥಾಪಕರಲ್ಲಿ ಪ್ರಮುಖರಾಗಿದ್ದ ಇವರು ಗುರುಸ್ವಾಮಿಯಾಗಿ ಅಯ್ಯಪ್ಪ ಮಾಲಾಧಾರಣೆ ಮಾಡಿ ಪ್ರಧಾನ ಗುರುಸ್ವಾಮಿಯಾಗಿದ್ದರು.
ಮೃತರು ಪತ್ನಿ, ಮೂವರು ಪುತ್ರರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.