ಬಿಜೆಪಿ ಸರಕಾರದ ಅವಧಿಯಲ್ಲಿ ಆಯವ್ಯಯ ತಯಾರಿಸದ 2,916 ಗ್ರಾ.ಪಂ.ಗಳು
► 2022-23ನೇ ಸಾಲಿನ ಆಯವ್ಯಯ ► ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ತಂಡದಿಂದ ಬಹಿರಂಗ

ಸಾಂದರ್ಭಿಕ ಚಿತ್ರ PC: freepik
ಬೆಂಗಳೂರು: ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದ ಒಟ್ಟು 5,952 ಗ್ರಾಮ ಪಂಚಾಯತ್ಗಳ ಪೈಕಿ 2,916 ಗ್ರಾಮ ಪಂಚಾಯತ್ಗಳು 2022-23ನೇ ಸಾಲಿನಲ್ಲಿ ಆಯವ್ಯಯವನ್ನೇ ತಯಾರಿಸಿರಲಿಲ್ಲ. ಮತ್ತು ಈ ಅವಧಿಯಲ್ಲಿ ಅನುಮೋದಿತ ಆಯವ್ಯಯವಿಲ್ಲದೇ ಕೋಟ್ಯಂತರ ರೂಪಾಯಿಗಳನ್ನು ನಿಯಮಬಾಹಿರವಾಗಿ ವೆಚ್ಚ ಮಾಡಿದ್ದವು ಎಂದು ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ತಂಡವು ಪತ್ತೆ ಹಚ್ಚಿರುವುದು ಇದೀಗ ಬಹಿರಂಗವಾಗಿದೆ.
ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮ 1993ರ ಕಲಂ 241, 242ರ ಪ್ರಕಾರ ಕರ್ನಾಟಕ ಪಂಚಾಯತ್ರಾಜ್ (ಗ್ರಾಮ ಪಂಚಾಯತ್ಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) 2006ರಲ್ಲಿ ರೂಪಿಸಿರುವ ನಿಯಮಗಳು ಮತ್ತು ಕಾಲಕಾಲಕ್ಕೆ ಆಯಾ ಯೋಜನೆಗಳಿಗೆ ಹೊರಡಿಸುವ ಮಾರ್ಗಸೂಚಿಗಳ ಅನುಸಾರ ಪ್ರತೀ ಗ್ರಾಪಂಗಳು ವಾರ್ಷಿಕ ಆಯವ್ಯಯ ತಯಾರಿಸಬೇಕು. ಆದರೆ 2,916 ಗ್ರಾಪಂಗಳು ಆಯವ್ಯಯವನ್ನೇ ತಯಾರಿಸದೇ ವೆಚ್ಚ ಮಾಡಿದ್ದವು.
2022-23ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯದ ಗ್ರಾಪಂಗಳ ಲೆಕ್ಕಪರಿಶೋಧನೆ ನಡೆಸಿರುವ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಇಲಾಖೆಯು ಸರಕಾರಕ್ಕೆ ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು ಗ್ರಾಪಂಗಳ ಹಣಕಾಸಿನ ಪರಿಸ್ಥಿತಿ ಮತ್ತು ಹಣಕಾಸಿನ ಅಶಿಸ್ತಿನ ವಿವಿಧ ಮಗ್ಗುಲುಗಳನ್ನು ಬಹಿರಂಗಪಡಿಸಿದೆ.
2025ರ ಮಾರ್ಚ್ನಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಿರುವ ಈ ವರದಿಯ ಪ್ರತಿಯು "the-file.in"ಗೆ ಲಭ್ಯವಾಗಿದೆ. ನಿಯಮಗಳ ಪ್ರಕಾರ ಗ್ರಾಪಂಗಳು ಆಯಾ ವರ್ಷದ ಫೆಬ್ರವರಿ 1ನೇ ತಾರೀಖಿನಿಂದ ಮಾರ್ಚ್ 10ನೇ ತಾರೀಖಿನ ಒಳಗೆ ನಡೆಸುವ ಗ್ರಾಪಂ ಸಭೆಯ ಮುಂದೆ ಆಯವ್ಯಯ ಮಂಡಿಸಿ ಅನುಮೋದನೆ ಪಡೆಯಬೇಕು.
ಹಾಗೆಯೇ 2006ರ ನಿಯಮಗಳ ಪ್ರಕಾರ ಗ್ರಾಪಂ ನಿಧಿಯಿಂದ ಅನುದಾನ ಹಂಚಿಕೆ ಇಲ್ಲದೇ ಯಾವುದೇ ವೆಚ್ಚವನ್ನು ಮಾಡುವಂತಿಲ್ಲ. ಇದು ಗ್ರಾಪಂಗಳ ಅಧ್ಯಕ್ಷರು ಮತ್ತು ಪಿಡಿಒಗಳ ಗಮನದಲ್ಲಿದ್ದರೂ 2,916 ಗ್ರಾಪಂಗಳು ಆಯವ್ಯಯವನ್ನೇ ಮಂಡಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
‘ಅನುಮೋದಿತ ಆಯವ್ಯಯವಿಲ್ಲದೇ ಗ್ರಾಪಂಗಳಿಂದ ಭರಿಸಲಾದ ವೆಚ್ಚಗಳು ನಿಯಮಬಾಹಿರವಾಗಿದ್ದು, ಇದು ಉಲ್ಲಂಘನೆಯಾಗಿದೆ’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಅಲ್ಲದೇ ಈ ಬಗ್ಗೆ ಹಿಂದಿನ ವರ್ಷಗಳ ವರದಿಗಳಲ್ಲಿ ತಿಳಿಸಿದ್ದರೂ 2,916 ಗ್ರಾಪಂಗಳು ಆಯವ್ಯಯವನ್ನು ತಯಾರಿಸಿ ಅನುಮೋದನೆ ಪಡೆಯಲು ಕ್ರಮವಹಿಸಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ವಿಶೇಷವೆಂದರೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಪಂಚಾಯತ್ಗಳು ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು ಮತ್ತು ಇಷ್ಟೂ ಪಂಚಾಯತ್ಗಳ ಸಾಮಾನ್ಯ ಸಭೆಗಳಲ್ಲಿ ವಾರ್ಷಿಕ ಆಯವ್ಯಯಕ್ಕೆ ಅನುಮೋದನೆ ದೊರೆತಿತ್ತು. ಅದೇ ರೀತಿ 5,952 ಪಂಚಾಯತ್ಗಳ ಪೈಕಿ 3,036 ಪಂಚಾಯತ್ಗಳಲ್ಲಿ ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು. ಈ ಪೈಕಿ 2,434 ಪಂಚಾಯತ್ಗಳ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ಆಯವ್ಯಯಗಳು ಅನುಮೋದಿತಗೊಂಡಿದ್ದವು.
ಆಯವ್ಯಯಕ್ಕೆ ಅನುಮೋದನೆ ಪಡೆದ ಗ್ರಾಪಂಗಳ ಪಟ್ಟಿ: ಬಾಗಲಕೋಟೆ ಜಿಲ್ಲೆಯಲ್ಲಿ 195 ಪಂಚಾಯತ್ಗಳ ಪೈಕಿ 52 ಪಂಚಾಯತ್ಗಳಲ್ಲಿ ಮಾತ್ರ ವಾರ್ಷಿಕ ಆಯವ್ಯಯ ನಿರ್ವಹಿಸಿತ್ತು. ಆದರೆ ಈ ಪೈಕಿ ಒಂದೇ ಒಂದು ಆಯವ್ಯಯವನ್ನು ಸಾಮಾನ್ಯ ಸಭೆಗಳಲ್ಲಿ ಅನುಮೋದಿತಗೊಂಡಿರಲಿಲ್ಲ. ಬೆಂಗಳೂರು ಜಿಲ್ಲೆಯಲ್ಲಿನ 187 ಪಂಚಾಯತ್ಗಳ ಪೈಕಿ 185 ಪಂಚಾಯತ್ಗಳಲ್ಲಿ ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು. ಈ ಪೈಕಿ 172 ಪಂಚಾಯತ್ಗಳ ವಾರ್ಷಿಕ ಆಯವ್ಯಯವನ್ನು ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ 226 ಪಂಚಾಯತ್ಗಳ ಪೈಕಿ 224 ಪಂಚಾಯತ್ಗಳಲ್ಲಿ ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು. ಇದರಲ್ಲಿ 223 ಪಂಚಾಯತ್ಗಳ ಆಯವ್ಯಯಕ್ಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರಕಿತ್ತು. ಚಿತ್ರದುರ್ಗ ಜಿಲ್ಲೆಯಲ್ಲಿನ 189 ಪಂಚಾಯತ್ಗಳ ಪೈಕಿ ಒಂದೇ ಒಂದು ಪಂಚಾಯತ್ ಮಾತ್ರ ವಾರ್ಷಿಕ ಆಯವ್ಯಯ ನಿರ್ವಹಿಸಿತ್ತು. ಇದಕ್ಕೂ ಸಹ ಸಾಮಾನ್ಯ ಸಭೆಯಿಂದ ಅನುಮೋದನೆ ದೊರೆತಿರಲಿಲ್ಲ.
ವಿಶೇಷವೆಂದರೇ ದಕ್ಷಿಣ ಕನ್ನಡ ಜಿಲ್ಲೆಯ 223 ಪಂಚಾಯತ್ಗಳ ಪೈಕಿ 223 ಪಂಚಾಯತ್ಗಳು ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿತ್ತು ಮತ್ತು ಇಷ್ಟಕ್ಕೂ ಸಾಮಾನ್ಯ ಸಭೆಯಲ್ಲಿ ಅನುಮೋದನೆಯೂ ದೊರೆತಿತ್ತು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ದಾವಣಗೆರೆ ಜಿಲ್ಲೆಯ 194 ಪಂಚಾಯತ್ಗಳ ಪೈಕಿ 132 ಪಂಚಾಯತ್ ಮಾತ್ರ ಆಯವ್ಯಯ ನಿರ್ವಹಿಸಿದ್ದವು. ಇದರಲ್ಲಿ 115 ಪಂಚಾಯತ್ಗಳ ವಾರ್ಷಿಕ ಆಯವ್ಯಯಗಳಿಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. ಧಾರವಾಡ ಜಿಲ್ಲೆಯ 145, ಗದಗ ಜಿಲ್ಲೆಯ 122 ಪಂಚಾಯತ್ಗಳ ಪೈಕಿ ಒಂದೇ ಒಂದು ಪಂಚಾಯತ್ಯೂ ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿರಲಿಲ್ಲ.
ಹಾಸನ ಜಿಲ್ಲೆಯ 264 ಪಂಚಾಯತ್ಗಳಲ್ಲಿಯೂ ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು. ಈ ಪೈಕಿ 249 ಪಂಚಾಯತ್ಗಳ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆತಿತ್ತು.
ಹಾವೇರಿ ಜಿಲ್ಲೆಯ 223 ಪಂಚಾಯತ್ಗಳಲ್ಲಿ 98 ಪಂಚಾಯತ್ಗಳಲ್ಲಿ ಮಾತ್ರ ವಾರ್ಷಿಕ ಆಯವ್ಯಯ ನಿರ್ವಹಿಸಿದ್ದು ಈ ಪೈಕಿ 45 ಪಂಚಾಯತ್ಗಳು ಮಾತ್ರ ಸಾಮಾನ್ಯ ಸಭೆಯಲ್ಲಿ ಆಯವ್ಯಯಕ್ಕೆ ಅನುಮೋದನೆ ಪಡೆದುಕೊಂಡಿದ್ದವು.
ಕೊಡಗಿನ 103 ಪಂಚಾಯತ್ಗಳ ಪೈಕಿ 102 ಪಂಚಾಯತ್ಗಳು ವಾರ್ಷಿಕ ಆಯವ್ಯಯ ನಿರ್ವಹಿಸಿದ್ದವು. ಆದರೆ 35 ಪಂಚಾಯತ್ಗಳ ಆಯವ್ಯಯಕ್ಕೆ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ದೊರೆತಿತ್ತು. ಕೋಲಾರದ 154 ಪಂಚಾಯತ್ಗಳ ಪೈಕಿ 153 ಪಂಚಾಯತ್ಗಳು ಆಯವ್ಯಯವನ್ನು ನಿರ್ವಹಿಸಿದ್ದು ಈ ಪೈಕಿ 105 ಪಂಚಾಯತ್ಗಳ ಆಯವ್ಯಯಕ್ಕೆ ಮಾತ್ರ ಸಾಮಾನ್ಯ ಸಭೆಗಳು ಅನುಮೋದನೆ ನೀಡಿದ್ದವು.
ಮಂಡ್ಯದ 233 ಪಂಚಾಯತ್ಗಳಲ್ಲಿ 233 ಪಂಚಾಯತ್ಗಳು ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿವೆಯಾದರೂ 230 ಪಂಚಾಯತ್ಗಳಿಗೆ ಮಾತ್ರ ಸಾಮಾನ್ಯ ಸಭೆಗಳು ಅನುಮೋದನೆ ದೊರಕಿತ್ತು. ಮೈಸೂರಿನ 256 ಪಂಚಾಯತ್ಗಳ ಪೈಕಿ 254 ಪಂಚಾಯತ್ಗಳ ವಾರ್ಷಿಕ ಆಯವ್ಯಯ ನಿರ್ವಹಿಸಿದ್ದವು. ಇದರಲ್ಲಿ 252 ಪಂಚಾಯತ್ಗಳ ಆಯವ್ಯಯಕ್ಕೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದವು.
ರಾಮನಗರದ 126 ಪಂಚಾಯತ್ಗಳಲ್ಲಿ 112 ಪಂಚಾಯತ್ಗಳು ವಾರ್ಷಿಕ ಆಯವ್ಯಯ ನಿರ್ವಹಿಸಿದ್ದವು. ಈ ಪೈಕಿ ಒಂದೇ ಒಂದು ಪಂಚಾಯತ್ ಕೂಡ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರಲಿಲ್ಲ. ಶಿವಮೊಗ್ಗ ಜಿಲ್ಲೆಯ 263 ಪಂಚಾಯತ್ಗಳ ಪೈಕಿ 139 ಮಾತ್ರ ವಾರ್ಷಿಕ ಆಯವ್ಯಯ ನಿರ್ವಹಿಸಿದ್ದರೇ ಇದರಲ್ಲಿ 134ಕ್ಕೆ ಮಾತ್ರ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ಪಡೆದುಕೊಂಡಿದ್ದವು.
ತುಮಕೂರಿನ 330 ಪಂಚಾಯತ್ಗಳಲ್ಲಿ 183 ಪಂಚಾಯತ್ಗಳಲ್ಲಿ ವಾರ್ಷಿಕ ಆಯವ್ಯಯ ನಿರ್ವಹಿಸಿದ್ದು ಇದರಲ್ಲಿ 180 ಪಂಚಾಯತ್ಗಳಿಗೆ ಅಲ್ಲಿನ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ದೊರಕಿತ್ತು. ಉಡುಪಿಯ 155 ಪಂಚಾಯತ್ಗಳಲ್ಲಿಯೂ ವಾರ್ಷಿಕ ಆಯವ್ಯಯ ನಿರ್ವಹಿಸಿದ್ದವು ಮತ್ತು ಇಷ್ಟೂ ಪಂಚಾಯತ್ಗಳ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಉತ್ತರ ಕನ್ನಡದ 229 ಪಂಚಾಯತ್ಗಳ ಪೈಕಿ 221 ಪಂಚಾಯತ್ಗಳ ವಾರ್ಷಿಕ ಆಯವ್ಯಯಗಳಿಗೆ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ದೊರೆತಿದ್ದವು.
ಕಲಬುರಗಿಯ 261 ಪಂಚಾಯತ್ಗಳಲ್ಲಿ ಒಂದೇ ಒಂದು ಪಂಚಾಯತ್ ಕೂಡ ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿರಲಿಲ್ಲ. ಅಚ್ಚರಿಯೆಂದರೇ 43 ಪಂಚಾಯತ್ಗಳು ಸಾಮಾನ್ಯ ಸಭೆಯಲ್ಲಿ ಆಯವ್ಯಯಕ್ಕೆ ಅನುಮೋದನೆ ಪಡೆದುಕೊಂಡಿದ್ದವು. ವಿಜಯನಗರ ಜಿಲ್ಲೆಯ 137, ವಿಜಯಪುರದ 211, ಯಾದಗಿರಿಯ 122, ಬೆಳಗಾವಿ ಜಿಲ್ಲೆಯಲ್ಲಿ 500, ಬಳ್ಳಾರಿಯಲ್ಲಿ 100, ಬೀದರ್ನಲ್ಲಿ 185 ಪಂಚಾಯತ್ಗಳಿದ್ದರೂ ಈ ಜಿಲ್ಲೆಗಳಲ್ಲಿನ ಒಂದೇ ಒಂದು ಪಂಚಾಯತ್ ಕೂಡ ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿರಲಿಲ್ಲ. ರಾಯಚೂರು ಜಿಲ್ಲೆಯ 179 ಪಂಚಾಯತ್ಗಳ ಪೈಕಿ ಒಂದೇ ಒಂದು ಪಂಚಾಯತ್ ಕೂಡ ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿರಲಿಲ್ಲ. ಕೊಪ್ಪಳ ಜಿಲ್ಲೆಯ 153 ಪಂಚಾಯತ್ಗಳ ಪೈಕಿ ಒಂದೇ ಒಂದು ಗ್ರಾಮ ಪಂಚಾಯತ್ ಕೂಡ ವಾರ್ಷಿಕ ಆಯವ್ಯಯ ನಿರ್ವಹಿಸಿರಲಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ 130 ಪಂಚಾಯತ್ಗಳ ಪೈಕಿ 26 ಮಾತ್ರ ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು. ಈ ಪೈಕಿ 19 ಪಂಚಾಯತ್ಗಳ ವಾರ್ಷಿಕ ಆಯವ್ಯಯಗಳಿಗೆ ಅಲ್ಲಿನ ಪಂಚಾಯತ್ಗಳ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ಪಡೆದುಕೊಂಡಿದ್ದವು ಎಂದು ವರದಿಯಲ್ಲಿ ದಾಖಲಿಸಿದೆ.